ಸೋಮವಾರ, ಮಾರ್ಚ್ 27, 2023
28 °C
ನಾಲ್ಕು ವರ್ಷದ ಹಿಂದೆಯೇ ಹಾಸನ ಜಿಲ್ಲೆ ಬಯಲು ಶೌಚಮುಕ್ತ ಘೋಷಣೆ

ಗ್ರಾಮದಲ್ಲಿ ತಪ್ಪಿಲ್ಲ ಬಯಲು ಬಹಿರ್ದೆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಾಲ್ಕು ವರ್ಷದ ಹಿಂದೆಯೇ ಹಾಸನ ಜಿಲ್ಲೆಯನ್ನು ಬಯಲು ಶೌಚಮುಕ್ತ ಎಂದು ಘೋಷಿಸಿದ್ದರೂ
ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಬದಲಾಗಿಲ್ಲ.

ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯ ಹೊಂದಿದ ಕುಟುಂಬಗಳ ಸಂಖ್ಯೆ 3.41 ಲಕ್ಷ. ವೈಯಕ್ತಿಕ ಶೌಚಾಲಯ
ಬಳಸು ವಂತೆ ಹಳ್ಳಿಗಳಲ್ಲಿ ಬೀದಿನಾಟಕ ಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಶೌಚಗೃಹ ನಿರ್ಮಿಸಿ ಕೊಂಡಿದ್ದರೂ ಜನರು ಕೆರೆ, ಕಟ್ಟೆ, ನಾಲೆ, ಕಾಲುವೆ ಕಡೆಗೆ ತೆರಳುವುದು ತಪ್ಪಿಲ್ಲ. ಕೆಲವು ಕಡೆ ಶೌಚಾಲಯಗಳನ್ನು ಕೃಷಿ ಪರಿಕರಗಳನ್ನು ಸಂಗ್ರಹಿಸುವ ಗೋದಾಮು ಮಾಡಿಕೊಳ್ಳಲಾಗಿದೆ. ಅರಿವಿನ ಕೊರತೆ, ನೀರಿನ ಅಲಭ್ಯದಿಂದ ಈಗಲೂ ಹಲವೆಡೆ ಬಯಲನ್ನೇ ಶೌಚಕ್ಕೆ ಅವಲಂಬಿಸಿದ್ದಾರೆ.

‌2020–21ನೇ ಸಾಲಿನಲ್ಲಿ 3699 ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿದ್ದು, ಈ ಪೈಕಿ 3644
ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 3073 ಶೌಚಾಲಯ ನಿರ್ಮಾಣವಾಗಿದೆ.

‌ಹಾಸನ ನಗರದಲ್ಲಿ ‌ಬಹುತೇಕ ಎಲ್ಲ ಕುಟುಂಬಗಳು ಶೌಚಾಲಯ ಹೊಂದಿವೆ. ನಗರದಲ್ಲಿ ಹದಿಮೂರು ಸಮುದಾಯ ಶೌಚಾಲಯವಿದೆ. ಮೂರು ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಹಾಗಾಗಿ ಸಾರ್ವಜನಿಕರು ಬಯಲು ಪ್ರದೇಶ ದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವಂತಾಗಿದೆ.

ಹಳೇಬೀಡಿನಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ಸಹಾಯಧನ ನೀಡಿದರೂ ದ್ವಾರಸಮುದ್ರ ಕೆರೆ ಬಳಿ
ಇರುವ ಬೂದಿಗುಂಡಿ ಬಡಾವಣೆಯಲ್ಲಿ ಸಾಕಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ದ್ವಾರಸಮುದ್ರ ಕೆರೆ ಆವರಣ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.

ಹಲವು ಮನೆಗಳಲ್ಲಿ ಒಬ್ಬರು ಕುಳಿತು ಕೊಂಡರೆ ಮತ್ತೊಬ್ಬರು ಮಲಗಿ ಕೊಳ್ಳುವಂತ ಪರಿಸ್ಥಿತಿ ಇದೆ. ಹೀಗಾಗಿ ಸಹಾಯ ಧನ ದೊರೆತರೂ ಶೌಚಾ ಲಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೊಯ್ಸಳೇಶ್ವರ ದೇವಾಲಯದ ದಕ್ಷಿಣ ದಿಕ್ಕಿನ ದ್ವಾರದ ಬಳಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಶೌಚಾಲಯ ಪಾಳು
ಬಿದ್ದಿದೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 66,254 ಕುಟುಂಬಗಳು (ಬಿಪಿಎಲ್, ನಿರ್ಬಂಧಿತ ಎಪಿ ಎಲ್ ಕಾರ್ಡ್‌ದಾರರು) ಇವೆ. ಶೌಚಾಲಯ ನಿರ್ಮಾಣದಲ್ಲಿ ಶೇ 99 ರಷ್ಟು ಪ್ರಗತಿ ಸಾಧಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ 12 ಸಾವಿರ ಕುಟುಂಬಗಳಿದ್ದು, ಬಹುತೇಕ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಕೆಲ ಕಡೆ ಜನರು ಬಯಲು ಪ್ರದೇಶವನ್ನು ಅವಲಂಬಿಸುತ್ತಾರೆ.

ಅರಕಲಗೂಡು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಎಲ್ಲ ಕುಟುಂಬಗಳೂ ಶೌಚಾಲಯ
ಹೊಂದಿವೆ. ಈಗಲೂ ಪುರುಷರು ಬೆಳಿಗ್ಗೆ ಕೆರೆ ಕಡೆಗೆ ಹೋಗುವ ಪದ್ಧತಿ ಇದೆ.

‘ಗಾಂಧಿ ಜಯಂತಿ, ರಾಷ್ಟ್ರೀಯ ಹಬ್ಬಗಳ ವೇಳೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರಿಂದ ಜಾಥಾ ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸ ಲಾಗುತ್ತಿದೆ’ ಎಂದು
ತಾ.ಪಂಚಾ. ಕಾರ್ಯ ನಿರ್ವಾಹಕ ಅಧಿಕಾರಿ ಎನ್. ರವಿಕುಮಾರ್ ತಿಳಿಸಿದರು.

‘ಸದ್ಯಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದೆ. ಫಲಾನುಭವಿಗಳಿಂದ ಅರ್ಜಿಗಳನ್ನು
ಪಡೆದು ಅನುದಾನ ಬಂದ ಬಳಿಕ ಹಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಲಸೆ ಕಾರ್ಮಿಕರು ಬಯಲು ಶೌಚ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕಟ್ಟಡದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.‌

ಬೇಲೂರು ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗವಿರುವ ಶೌಚಾಲಯವನ್ನು ಸಂಜೆ 7 ಗಂಟೆಗೆ
ಮುಚ್ಚುವುದರಿಂದ ಪ್ರವಾಸಿಗರಿಗೆ ತೊಂದರೆ ಯಾಗುತ್ತಿದೆ. ಮಯೂರ ಹೋಟೆಲ್ ಸಮೀಪ ಪುರಸಭೆ
ನಿರ್ಮಿಸಿರುವ ಶೌಚಾಲಯ ನಿರ್ವಹಣೆ ಇಲ್ಲದೆ ಬಂದ್ ಆಗಿದೆ.

‌‘ಶೌಚಾಲಯಕ್ಕೆ ಅರ್ಜಿ ನೀಡಿದರೆ ಪರಿಶೀಲಿಸಿ ತಕ್ಷಣದಲ್ಲೇ ಹಣ ನೀಡಲಾಗುತ್ತಿದೆ’ ಎಂದು ತಾಲ್ಲೂಕು
ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ರವಿಕುಮಾರ್ ತಿಳಿಸಿದರು.

‘ಬೇಲೂರು ನಗರವನ್ನು ಬಯಲು ಶೌಚಮುಕ್ತವನ್ನಾಗಿ ಮಾಡಲಾಗಿದೆ. ಮಯೂರ ಹೋಟೆಲ್ ಸಮೀಪವಿರುವ ಶೌಚಾಲಯಕ್ಕೆ ಯಾರೂ ಬರುವುದಿಲ್ಲ ಎಂದು ನಿರ್ವಹಣೆ ವಹಿಸಿಕೊಳ್ಳಲು ಯಾರೂ ಮುಂದೆ
ಬರುತ್ತಿಲ್ಲ. ಸದ್ಯದಲ್ಲೇ ಕ್ರಮ ಕೈಗೊಳ್ಳ ಲಾಗುವುದು’ ಎಂದೂ ಪುರಸಭೆ ಮುಖ್ಯಾಧಿ ಕಾರಿ ಸುಜಯ್ ಕುಮಾರ್ ತಿಳಿಸಿದರು.

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನ್ನು ಎಂಬುವರು ಪುಟ್ಟ ಮನೆಯಲ್ಲಿ ವಾಸವಿದ್ದಾರೆ. ಈವರೆಗೂ
ಮನೆಯಲ್ಲಿ ಶೌಚಾಲಯ ಇಲ್ಲದಿರುವುದರಿಂದ ಬಯಲು ಅವಲಂಬಿಸಿದ್ದಾರೆ. ಸೈಕಲ್ ರಿಪೇರಿ ವೃತ್ತಿ ಮಾಡುವ ಇವರಿಗೆ ನಿತ್ಯ ಜೀವನ ಕಷ್ಟವಾಗಿದೆ. ಮನೆ ಬೀಳುವ ಸ್ಥಿತಿಯಲ್ಲಿದೆ.

‘ಸರ್ಕಾರ ಶೌಚಾಲಯದ ಜೊತೆಗೆ ಮನೆ ಕಟ್ಟಿ ಕೊಡಬೇಕು’ ಎನ್ನುತ್ತಾರೆ ಅನ್ನು.

ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ‌

2017 ಅಕ್ಟೋಬರ್ ನಲ್ಲಿ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಶೌಚಾಲಯ ಬಳಸುವಂತೆ ಆರೋಗ್ಯ ಇಲಾಖೆ ಮತ್ತು ಪಂಚಾಯಿತಿ ಸಿಬ್ಬಂದಿ ಮನೆಗೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಬೀದಿ ನಾಟಕ, ಕರ ಪತ್ರ ಹಂಚಿಕೆ, ಕಿರುಚಿತ್ರ ಪ್ರದರ್ಶನ, ಜಾಥಾ ಮಾಡಲಾಗಿದೆ. ಶೇ.10 ರಷ್ಟು ಜನರು ಬಯಲು ಪ್ರದೇಶ ಆಶ್ರಯಿಸಿದ್ದಾರೆ. ಶೌಚಾಲಯ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗಕ್ಕೆ ₹12 ಸಾವಿರ, ಎಸ್ಸಿ, ಎಸ್‌ಟಿ ವರ್ಗಕ್ಕೆ ₹ 15 ಸಾವಿರ ಅನುದಾನ ನೀಡಲಾಗಿದೆ. ಕಟ್ಟಡ ಕೆಲಸ, ಇತರೆ ಕೆಲಸಕ್ಕೆ ವಲಸೆ ಬಂದವರು ಬಯಲು ಪ್ರದೇಶ ಅವಲಂಬಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. 

 ಎಚ್.ವಿ. ನಾಗರಾಜ್‌, ಸ್ವಚ್ಛ ಭಾರತ ಮಿಷನ್‌, ಜಿಲ್ಲಾ ನೋಡಲ್‌ ಅಧಿಕಾರಿ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.