ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಮಳೆಕಾಡುಗಳಲ್ಲಿ ನಿಲ್ಲದ ಅಕ್ರಮ ಚಟುವಟಿಕೆ

ಸಿಬ್ಬಂದಿ ಕೊರತೆ: ಅರಣ್ಯ ಇಲಾಖೆ ಅಧಿಕಾರಿಗಳ ಅಸಹಾಯಕತೆ
Last Updated 5 ಸೆಪ್ಟೆಂಬರ್ 2020, 4:09 IST
ಅಕ್ಷರ ಗಾತ್ರ

ಸಕಲೇಶಪುರ: ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ವನ್ಯ ಜೀವಿಗಳ ಬೇಟೆ, ಕಾಡು ಉತ್ಪನ್ನಗಳ ಕಳ್ಳ ಸಾಗಣೆ ರಾಜಾರೋಷವಾಗಿ ನಡೆಯುತ್ತಿದೆ.

ಕಾಡಮನೆ ಸಮೀಪ ರಕ್ಷಿತ ಅರಣ್ಯ ಪ್ರದೇಶದಲ್ಲಿ 6 ಮಂದಿ ಬೇಟೆಗಾರರ ತಂಡ ಇತ್ತೀಚೆಗೆ ಕಾಡುಕೋಣವನ್ನು (ಕಾಟಿ) ಬೇಟೆಯಾಡಿದ್ದಾರೆ. ಅರಣ್ಯ ದಲ್ಲೇ ಟೆಂಟ್ ಹಾಕಿ ಕಾಟಿಯ ಮಾಂಸ ವನ್ನು ಒಣಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ. ಇದೇ ಪ್ರದೇಶದಲ್ಲಿ ಕಾಡಾನೆ ದಂತಗಳನ್ನು ಕತ್ತರಿಸಿ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡಿದ್ದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಬಂಧಿಸಿದ್ದಾರೆ.

ಆರೋಪಿಗಳ ಸುಳಿವು ಸಿಗದ ಹಲವು ಪ್ರಕರಣಗಳು ಇಲ್ಲಿ ನಡೆಯುತ್ತವೆ. ಸ್ವಾಭಾವಿಕವಾಗಿಯೋ, ಕಾದಾಟ, ಅಪಘಾತ ಇಲ್ಲವೆ ಗುಂಡೇಟಿನಿಂದ ಮೃತಪಟ್ಟ ಕಾಡಾನೆಗಳಿಂದ ದಂತ ಕತ್ತರಿಸಿಕೊಂಡು ಹೋಗಿರುವ ಕಳ್ಳರು, ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಶೋಲಾ ಹುಲ್ಲುಗಾವಲಿನ ಮಧ್ಯದಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದ ಹಾಗೂ ತಲೆಮರೆಸಿಕೊಂಡ ಪ್ರಕರಣಗಳೂ ಆಗಾಗ ಬೆಳಕಿಗೆ ಬರುತ್ತವೆ. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದಾಗಿ ರಕ್ಷಿತ ಅರಣ್ಯಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇವೆ ಎಂದು ಪರಿಸರವಾದಿ ಎಚ್‌.ಎಂ.ಕಿಶೋರ್‌ ಕುಮಾರ್‌ ಆತಂಕ ವ್ಯಕ್ತಪಡಿಸುತ್ತಾರೆ.

ಕಾಡು ಉತ್ಪನ್ನಗಳ ಲೂಟಿ: ಇಲ್ಲಿರುವ ದೂಪ, ಚಕ್ಕೆ, ಹುಣಸೆ, ಹುಳಿಕಾಯಿ, ನೀಲಗಿರಿ, ಬೀಡಿ ಎಲೆ, ಹಲವು ಬಗೆಯ ಔಷಧೀಯ ಸಸ್ಯಗಳು, ಹೂವುಗಳು ಸೇರಿದಂತೆ ವಿವಿಧ ಅರಣ್ಯ ಉತ್ಪನ್ನಗಳ ಲೂಟಿ ನಡೆಯುತ್ತಿದೆ. ಕಾಡಿನೊಳಗೆ ಜಲವಿದ್ಯುತ್‌ ಯೋಜನೆಗಳು, ಎತ್ತಿನಹೊಳೆ ಯೋಜನೆ, ಪೆಟ್ರೋಲಿಯಂ ಪೈಪ್‌ಲೈನ್‌ ಸೇರಿದಂತೆ ಹಲವು ಯೋಜನೆಗಳಿಗೆ ಸರ್ಕಾರವೇ ಅನುಮತಿ ನೀಡಿದೆ. ಯಂತ್ರಗಳು, ಡೈನಮೆಟ್‌ಗಳ ಶಬ್ದಕ್ಕೆ ವನ್ಯಜೀವಿಗಳು ದಿಕ್ಕೆಟ್ಟು ರೈತರ ತೋಟ, ಗದ್ದೆಗಳತ್ತ ನುಗ್ಗುತ್ತವೆ ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ರಕ್ಷಿತ ಅರಣ್ಯಗಳು: ಕಬ್ಬಿನಾಲೆ ರಕ್ಷಿತ ಅರಣ್ಯ 9,908 ಹೆಕ್ಟೇರ್‌, ಕೆಂಚನ ಕುಮರಿ ರಕ್ಷಿತ ಅರಣ್ಯ 857.10 ಹೆಕ್ಟೇರ್‌, ಕಾಗಿನಹರೆ ರಕ್ಷಿತ ಅರಣ್ಯ 2,907.82 ಹೆಕ್ಟೇರ್‌, ಹಿರೇಮಂದಿ 37.49 ಹೆಕ್ಟೇರ್‌, ವಡೂರು 35.21 ಹೆಕ್ಟೇರ್‌, ಬಿಸಿಲೆ ರಕ್ಷಿತ ಅರಣ್ಯ 3,858.18 ಹೆಕ್ಟೇರ್‌ ಸೇರಿ 17,418.71 ಹೆಕ್ಟೇರ್‌ ರಕ್ಷಿತ ಅರಣ್ಯ ಪ್ರದೇಶ ಸರ್ಕಾರಿ ದಾಖಲೆಗಳಲ್ಲಿ ಇದೆ.

ಸಕಲೇಶಪುರ, ಯಸಳೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಬೇಟೆ, ಅರಣ್ಯ ಉತ್ಪನ್ನ ಗಳ ಕಳ್ಳತನದ ಹಲವು ಪ್ರಕರಣಗಳನ್ನು ಇಲಾಖೆ ಪತ್ತೆ ಹಚ್ಚಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿ ಅರಣ್ಯ ರಕ್ಷಣೆ, ಕಾಡು ಪ್ರಾಣಿ ಬೇಟೆ, ಮರಗಳ್ಳತನ, ಬೀಟೆ, ಶ್ರೀಗಂಧ ಕಳ್ಳತನ ಪ್ರಕರಣ ತಡೆಯಬೇಕು. ಜತೆಗೆ ಕಾಡಾನೆಗಳ ಕಾರ್ಯಾಚರಣೆಯಲ್ಲೂ ತೊಡಗಬೇಕು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ 24X7 ಕೆಲಸ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT