ಹಾಸನ : ಮಧ್ಯಪ್ರದೇಶದ ಮಂಡ್ಸೂರ್ ನಲ್ಲಿ ಈಚೆಗೆ ನಡೆದ ಏಳು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಮೇಣದ ಬತ್ತಿಯೊಂದಿಗೆ ಜಮಾಯಿಸಿದ ಕಾರ್ಯಕರ್ತರು ಬಾಲಕಿ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಿದರು. ‘ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಕೆಲಸ ದೇಶದಲ್ಲಿ ನಡೆದಿದೆ. ಇರ್ಫಾನ್ ಎಂಬಾತ ಶಾಲಾ ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾನೆ. ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಮಾದ ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ದೇಶದಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳಿಗೂ ಬೀದಿಗಿಳಿದು ಹೋರಾಟ ಮಾಡುವ ಸ್ವಯಂ ಘೋಷಿತ ಪ್ರಗತಿಪರರು ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಜಾಣ ಮೌನ ವಹಿಸಿದ್ದಾರೆ. ಆರೋಪಿ ಅಲ್ಪಸಂಖ್ಯಾತ ಎಂಬ ಕಾರಣಕ್ಕಾಗಿ ಎಲ್ಲರೂ ಆತನ ಬಗ್ಗೆ ಮೃದು ಧೋರಣೆ ತಾಳಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ವ್ಯಾಪಕ ಪ್ರತಿಭಟನೆ ನಡೆಸಿದ್ದ ಎಡಪಂಥೀಯರು ಈ ವಿಚಾರದಲ್ಲಿ ಸುಮ್ಮನಿರುವುದು ಖಂಡನೀಯ’ ಎಂದರು.
ವೇದಿಕೆಯ ನಗರ ಕಾರ್ಯದರ್ಶಿ ನವೀನ್, ಜಿಲ್ಲಾ ಕಾರ್ಯದರ್ಶಿ ರಘುನಂದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಶ್ ಕದಾಳು ಹಾಗೂ ಎಚ್.ಎನ್. ನಾಗೇಶ್, ಮೋಹನ್ ಇದ್ದರು.