ಆಲೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಶ್ರೀರಾಮನ ಪಾದುಕೆಗಳು ಗೋಚರಿಸಿರುವ ತಾಲ್ಲೂಕಿನ ಕಾಗನೂರು ಗ್ರಾಮ ಭಕ್ತರಿಗೆ ಆರಾಧನೆಯ ಕೇಂದ್ರವಾಗಿವೆ.
ಶ್ರೀರಾಮ ಆಲೂರು ತಾಲ್ಲೂಕಿಗೆ ಭೇಟಿ ನೀಡಿದ್ದ ಎಂಬ ಪೂರ್ವಿಕರ ಮಾತುಗಳಿಗೆ ಈ ಕುರುಹುಗಳು ಪುಷ್ಟಿ ನೀಡಿದ್ದು, ಸಾರ್ವಜನಿಕರು ತಂಡೋಪ ತಂಡವಾಗಿ ಬಂದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆಯುತ್ತಿದ್ದಾರೆ.
ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದ ಹೇಮಾವತಿ ನದಿ ತೀರದಲ್ಲಿ ಪಾದಾಕೆಕಲ್ಲು ಎಂಬ ಸ್ಥಳವಿದ್ದು ಅಲ್ಲಿಯೂ ಪೂಜೆ ಸಲ್ಲಿಸಲಾಯಿತು. ಇಲ್ಲಿ ಈಶ್ವರ ಲಿಂಗ, ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆ ಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿದೆ.
ಆಂಜನೇಯ ಶ್ರೀರಾಮರನ್ನು ಹೊತ್ತೊಯ್ದಿರುವ ಕುರುಹಾಗಿ ಇರುವ ದೊಡ್ಡ ಪಾದ ಆಂಜನೇಯನದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ. ವಿಶೇಷತೆಯುಳ್ಳ ಈ ಬಂಡೆ ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿ ಹೋಗುತ್ತದೆ. ಹೀಗಾಗಿ ಈ ಸ್ಥಳಕ್ಕೆ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಬರುತ್ತಿದ್ದಾರೆ.
ಸ್ಥಳದಲ್ಲಿ ನೆಲೆಸದ ಶ್ರೀರಾಮ: ಶ್ರೀರಾಮನು ಲಂಕಾಧೀಶ ರಾವಣನ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ಪರಿಹಾರಾಕ್ಕಾಗಿ ಲೋಕ ಸಂಚಾರ ಕೈಗೊಂಡಿದ್ದಾಗ ಕಾಗನೂರು ಗ್ರಾಮಕ್ಕೆ ಬಂದು ಇಲ್ಲಿ ಶಿವಲಿಂಗಮೂರ್ತಿ ಸೃಷ್ಟಿಸಿದ್ದ ಎಂದು ಇತಿಹಾಸ ಹೇಳುತ್ತದೆ.
ಪಕ್ಕದಲ್ಲಿ ಹರಿಯುವ ಹೇಮಾವತಿ ನದಿಯನ್ನು ವ್ಯಕ್ತಿಯೊಬ್ಬ ದಾಟುತ್ತಿದ್ದ. ತನ್ನ ತಾಯಿಯನ್ನು ನಡೆಸಿಕೊಂಡು, ಪತ್ನಿಯನ್ನು ಹೆಗಲಲ್ಲಿ ಕುಳ್ಳಿರಿಸಿ ಕರೆದೊಯ್ಯುವ ದೃಶ್ಯ ನೋಡಿ, ಶ್ರೀರಾಮನು ತಾನು ನೆಲೆಸಲು ಈ ಸ್ಥಳ ಯೋಗ್ಯವಲ್ಲವೆಂದು ಮುಂದಿನ ಪ್ರಯಾಣಕ್ಕೆ ಅಣಿಯಾಗುತ್ತಾರೆ. ತಾಯಿ ಕಾಲ್ನಡಿಗೆಯಲ್ಲಿ ಬರುವುದು, ಹೆಂಡತಿ ಹೆಗಲ ಮೇಲೆ ಬರುವುದು ಮಾನವೀಯತೆ ಅಲ್ಲ ಎಂಬುದು ರಾಮನ ನಿಲುವಾಗಿರುತ್ತದೆ. ಈ ಸ್ಥಳದಲ್ಲಿ ಆಹಾರ, ವಿಹಾರ, ವಿನೋದಗಳು ನಡೆದ ಲಕ್ಷಣಗಳಿವೆ. ಹಾಗಾಗಿ ಜಾಗ ಬದಲಿಸಿದ್ದಾರೆ ಎಂಬ ಪ್ರತೀತಿ ಇದೆ.
ಇತಿಹಾಸದ ಪುಟಗಳನ್ನು ಕೆದಕುತ್ತ ಹೋದರೆ ಇನ್ನೂ ಸಾಕಷ್ಟು ಮಾಹಿತಿ ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು-ಸತ್ಯನಾರಾಯಣ ಹರಿಹಳ್ಳಿ ಗ್ರಾಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.