ಸೋಮವಾರ ಬೆಳಿಗ್ಗೆ 11.30 ರಿಂದ ಮೈಸೂರಿನಿಂದ ಬಂದಿದ್ದ ಆರು ಆನೆಗಳ ತಂಡ ಮೂರು ಗುಂಪುಗಳಾಗಿ ಕೂಂಬಿಂಗ್ ಆರಂಭಿಸಿತು. ಈ ವೇಳೆ ಮಾವುತರು, ಎರಡು ಆನೆಗಳನ್ನು ಕಾಡಾನೆ ಬರುವ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿದ್ದರು. ಮಧ್ಯಾಹ್ನ 3.30ರ ವೇಳೆಗೆ ಕಾಡಾನೆಗೆ ಅರಿವಳಿಕೆ ನೀಡಲು ತಂಡ ಸುತ್ತುವರೆಯಿತು. ಎರಡು ಸಾಕಾನೆಗಳನ್ನು ನಿಲ್ಲಿಸಿ ಕಾಯುತ್ತಿದ್ದ ಸ್ಥಳದಲ್ಲಿ ಪಕ್ಕದ ರಸ್ತೆಗೆ ಇಳಿದ ಒಂಟಿ ಸಲಗ (ಭೀಮಾ), ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಇಬ್ಬಂದಿ ಇರುವ ಕಡೆಗೆ ಧಾವಿಸಿ ಬಂತು. ಸ್ಥಳದಲ್ಲಿದ್ದವರು ಕೂಗಾಡುತ್ತಾ ಓಡತೊಡಗಿದರು. ಏನು ಮಾಡಬೇಕೆಂದು ತಿಳಿಯದೆ ಗಾಬರಿಗೊಂಡ ಮಾವುತ ಕೃಷ್ಣ, ಆನೆಯನ್ನು ತಿರುಗಿಸಿಕೊಂಡು ಓಡಿದರು.