ಆಲೂರು: ತಾಲ್ಲೂಕಿನ ಹೆದ್ದುರ್ಗ ಕೂಡಿಗೆ ಬಳಿಯ ಹೊನ್ನವಳ್ಳಿಯಲ್ಲಿ ಎಂ ಸ್ಯಾಂಡ್ (ಉತ್ಪಾದಿತ ಮರಳು)ನೊಳಗೆ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಗುತ್ತಿಗೆದಾರ ಬಿ.ಎ.ಯೂಸಫ್ ಎಂಬುವವರು ಕಾಮಗಾರಿಗೆಂದು ಎಂ ಸ್ಯಾಂಡ್ ಸಂಗ್ರಹ ಮಾಡಿದ್ದರು. ಸ್ಥಳೀಯರೊಬ್ಬರು ಒಂದಿಷ್ಟು ಮರಳು ತೆಗೆದುಕೊಳ್ಳಲು ಹೋದಾಗ ಮಹಿಳೆ ಕಾಲುಗಳು ಕಂಡಿವೆ. ತಕ್ಷಣ ಯೂಸಫ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
‘ಸುಮಾರು 25 ವರ್ಷದ ಮಹಿಳೆ ಶವ ಕೊಳೆತು ಹೋಗಿದ್ದು, ನಾಲ್ಕೈದು ತಿಂಗಳ ಹಿಂದೆ ಕೊಲೆ ಮಾಡಿ ಶವವನ್ನು ಹೂತು ಹಾಕಿರಬಹುದು. ವೈದ್ಯಕೀಯ ಪರೀಕ್ಷೆ ನಂತರ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಶವವನ್ನು ಆಸ್ಪತ್ರೆಗೆ ರವಾನಿಸಿ ತನಿಖೆ ಕೈಗೊಳ್ಳಲಾಗಿದೆ.
ಡಿವೈಎಸ್ಪಿ ಗೋಪಿ, ಇನ್ಸ್ಪೆಕ್ಟರ್ ಗಿರೀಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ್, ಎಚ್.ಸಿ ಗುರುಮೂರ್ತಿ, ಸಿಬ್ಬಂದಿ ಇದ್ದರು.