ಹಾಸನ: ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಮತ್ತೆ ಹರಿ ಹಾಯ್ದಿರುವ ಸಚಿವ ಎಚ್.ಡಿ.ರೇವಣ್ಣ, ಅವರಂಥವರಿಂದಲೇ ಬಿಜೆಪಿಗೆ ಈ ಗತಿ ಬಂದಿದೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ‘ರೇಣುಕಾಚಾರ್ಯಗೆ ಮಾನ ಮರ್ಯಾದೆ ಇಲ್ಲ. ನಾನು ನನ್ನ ಜೀವನದಲ್ಲಿ ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗಿಲ್ಲ’ ಎಂದರು ತಿರುಗೇಟು ನೀಡಿದರು.
‘ನನ್ನ ಹಾಗೂ ನಮ್ಮ ಕುಟುಂಬದ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗುವ ಅವಶ್ಯಕತೆ ಬಂದಿಲ್ಲ’ ಎಂದರು.
‘ದೇವೇಗೌಡರ ಕಾಲದಿಂದಲೂ ನಾನು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದೇನೆ. ಆಪರೇಷನ್ ಕಮಲ ಆಡಿಯೊ ಬಗ್ಗೆ ಎಸ್ಐಟಿ ತನಿಖೆ ಆಗಲೇಬೇಕು. ಈ ವಿಚಾರದಲ್ಲಿ ಸ್ಪೀಕರ್ ಗೌರವ ಉಳಿಯಬೇಕು. ಈ ಮೂಲಕ ರಾಜ್ಯ-ರಾಷ್ಟ್ರದಲ್ಲಿ ಇತಿಹಾಸ ನಿರ್ಮಾಣ ಆಗಬೇಕು’ ಎಂದು ಪ್ರತಿಪಾದಿಸಿದರು.
‘ಆಡಿಯೊ ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ಧ’ ಎಂದು ಯಡಿಯೂರಪ್ಪ ಪುನರುಚ್ಛಾರ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಅವರೇ ಆಡಿಯೊ ನಂದೇ ಎಂದು ತಪ್ಪೊಪ್ಪಿಕೊಂಡಿದ್ದಾರಲ್ಲಾ’ ಎಂದು ಮರು ಪ್ರಶ್ನೆ ಹಾಕಿದರು.