ರಾಮನಾಥಪುರ: ಖಾಸಗಿ ಶಾಲೆಯಲ್ಲಿ ಕಡಿಮೆ ಸಂಬಳಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಬೇಸತ್ತ ಇಲ್ಲಿನ ಕೂಡಲೂರು ಪ್ರಗತಿಪರ ರೈತ ಜನಾರ್ದನ್ ಅವರು ಭೂಮಿಯನ್ನು ನಂಬಿ ಕೃಷಿಯಲ್ಲಿ ತೊಡಗಿದರು. ಛಲ ಬಿಡದೆ ದುಡಿದ ಪರಿಣಾಮ ಭೂಮಿತಾಯಿ ಕೈಹಿಡಿದು ಮೇಲೆತ್ತಿದ್ದಾಳೆ. ಬಂಪರ್ ಬಾಳೆ ಬೆಳೆದು ಯಶಸ್ಸು ದಾಖಲಿಸಿದ್ದಾರೆ.
ತಮ್ಮ 15 ಎಕರೆ ಭೂಮಿಯಲ್ಲಿ ಸುಮಾರು 3 ಎಕರೆ ಜಾಗದಲ್ಲಿ ಬಾಳೆ ಹಾಕಿದ್ದರೆ, ಇನ್ನುಳಿದ ಭೂಮಿಯಲ್ಲಿ ಶುಂಠಿ, ಅಡಿಕೆ ನರ್ಸರಿ, ತೆಂಗು ಹಾಗೂ ದ್ವಿದಳ ದಾನ್ಯಗಳಾದ ಭತ್ತ, ರಾಗಿ ಬೆಳೆದಿದ್ದಾರೆ. ಈ ಹಿಂದೆ ವಾಣಿಜ್ಯ ಬೆಳೆಯಾದ ತಂಬಾಕನ್ನೂ ಬೆಳೆಯುತ್ತಿದ್ದರು.
ಕೂಲಿ ಕಾರ್ಮಿಕರ ಕೊರತೆ ಹಾಗೂ ತಂಬಾಕನ್ನು ಹದಗೊಳಿಸಲು ಅಧಿಕ ಹಣ ವ್ಯಯ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಏಲಕ್ಕಿ ಬಾಳೆ ಬೆಳೆದರು. ಇದರ ಪರಿಣಾಮ ತಿಂಗಳಲ್ಲಿ ₨ 1 ಲಕ್ಷದಿಂದ 1.5 ಲಕ್ಷದವರೆಗೆ ಸಂಪಾದಿಸುತ್ತಿದ್ದಾರೆ.
6 ತಿಂಗಳ ಹಿಂದೆ ಹುಣಸೂರಿನಿಂದ 3 ಸಾವಿರ ಉತ್ತಮ ತಳಿಯ ಬಾಳೆ ಕಂದನ್ನು ತಂದು ನಾಟಿ ಮಾಡಿದ್ದರು. ಮೂರು ಎಕರೆ ಭೂಮಿಗೆ ಸುಮಾರು 200 ಟ್ರ್ಯಾಕ್ಟರ್ ಕೆರೆ ಗೋಡನ್ನು ಹಾಕಿ ಭೂಮಿಯನ್ನು ಹದಗೊಳಿಸಿ ಜೆ.ಸಿ.ಬಿ ಯಂತ್ರದಿಂದ ಟ್ರಂಚ್ ಮಾಡಿಸಿ 8ರಿಂದ 10 ಅಡಿ ಅಂತರದಲ್ಲಿ ಬಾಳೆ ನಾಟಿ ಮಾಡಿದ್ದರು.
ಪ್ರತಿವಾರ ಹಾಸನದ ಮಾರುಕಟ್ಟೆಯಲ್ಲಿ ಬಾಳೆಕಾಯಿಯನ್ನು ಬಿಕರಿ ಮಾಡುತ್ತಿದ್ದು ಇಲ್ಲಿಯವರೆಗೂ ಕೆ.ಜಿ.ಗೆ 30ರಿಂದ 35 ರೂಪಾಯಿ ಬೆಲೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಕೊಡುವ ಇರಾದೆ ಇದೆ ಎನ್ನುತ್ತಾರೆ ಜನಾರ್ದನ್.
ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಉತ್ತಮ ಇಳುವರಿ ಬಂದಿದೆ. ಸುಮಾರು 3 ಎಕರೆ ಬಾಳೆ ಬೆಳೆಯಲು 1.5 ಲಕ್ಷ ಖರ್ಚಾಗಿದ್ದು, ಈಗಾಗಲೇ ₨ 2 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಪಾದಿಸಿದ್ದೇವೆ. ಬಾಳೆ ಬೆಳೆಯಲು ಪುತ್ರರಾದ ಮಧುಸೂದನ್, ಮನೋಜ್, ಹಾಗೂ ಪತ್ನಿ ಸೌಮ್ಯಾ ಸಹಕಾರ ನೀಡು ತ್ತಿದ್ದಾರೆ ಎನ್ನುತ್ತಾರೆ ಜನಾರ್ದನ್.
ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿದರೆ ರೈತರು ಲಾಭದಾಯಕ ಕೃಷಿಯಲ್ಲಿ ತೊಡಗಿಕೊಳ್ಳಬಹುದು ಎಂಬುದಕ್ಕೆ ಜನಾರ್ದನ್ ಸಾಕ್ಷಿ ಎಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೊನಗಹಳ್ಳಿ ಜಗದೀಶ್ ನುಡಿಯುತ್ತಾರೆ. ಜನಾರ್ದನ್ ಅವರ ಮೊ: 73537 01999 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.