ಬಾಣಾವರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಧ್ಯೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಧ್ಯಾರ್ಥಿ ಬಿ.ಎಂ. ಧನುಷ್ ಕಳೆದ ಏಪ್ರಿಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿಹೆಚ್ಚು ಅಂಕ ಪಡೆದಿದ್ದಾನೆ.ಪಟ್ಟಣದ ಕೋಟೆ ಬಡಾವಣೆಯ ಹಣ್ಣಿನ ವ್ಯಾಪಾರಿ ಮೂರ್ತಿ ಮತ್ತು ಲೀಲಾವತಿ ದಂಪತಿ ಪುತ್ರ ಬಿ.ಎಂ. ಧನುಷ್ ಶೇ 99.04(619) ಅಂಕ ಗಳಿಸಿದ್ದಾನೆ.
ರಜೆ ಅವಧಿಯಲ್ಲಿ ತಂದೆಯ ವ್ಯಾಪಾರಕ್ಕೆ ಸಹಾಯ ಮಾಡುತ್ತಾ, ಯಾವುದೇ ಟ್ಯೂಷನ್ ಸಹಾಯವಿಲ್ಲದೆ ಶಾಲೆಯಲ್ಲಿ ಶಿಕ್ಷಕರು ಮಾಡಿದ ಅಂದಿನ ಪಾಠವನ್ನು ಅಂದೇ ಓದಿ ಮನನ ಮಾಡಿಕೊಂಡಿರುವುದೇ ಈ ಸಾಧನೆಗೆ ಕಾರಣ ಎನ್ನುತ್ತಾನೆ.
ಭವಿಷ್ಯದ ಪರೀಕ್ಷೆಗಳಿಗೆ 8, 9ನೇ ತರಗತಿಯ ಪಠ್ಯಕ್ರಮ ಬುನಾದಿ ಇದ್ದಂತೆ. ಅದನ್ನು ನಾವು ನಿರ್ಲಕ್ಷಿಸಬಾರದು. ಓದುವ ಸಮಯದಲ್ಲಿ ಅತಿ ಹೆಚ್ಚಿನ ಒತ್ತಡಕ್ಕೆ ಒಳಗಾಗದೆ ತಮ್ಮ ದಿನ ನಿತ್ಯದ ಸಮಯಕ್ಕೆ ಯೋಗ್ಯ ರೀತಿಯ ಯೋಜನೆ ಸಿದ್ಧಪಡಿಸಿಕೊಂಡು ವರ್ಷದ ಆರಂಭ ದಿಂದ ಓದಿದರೆ ಯಶ ದೊರೆಯುತ್ತದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ 600 ಅಂಕ ಪಡೆಯುವ ದೃಢ ನಿರ್ಧಾರದಿಂದ ಓದಲು ಆರಂಭಿಸಿದ್ದೇ ಯಶಸ್ಸಿಗೆ ಕಾರಣ. ಪ್ರತಿನಿತ್ಯ ನಾವು ತೊಡಗಿಕೊಳ್ಳುವ ಆಟ, ಉಲ್ಲಾಸ, ತಾಳ್ಮೆ, ಏಕಾಗ್ರತೆ, ನಮ್ಮ ಕಠಿಣ ಪರಿಶ್ರಮದಲ್ಲಿ ಜತೆಯಾಗಿರಬೇಕು ಎಂದು ಆಭಿಪ್ರಾಯ ಪಡುತ್ತಾನೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭೆಗೆ ಉತ್ತಮ ಮಾರ್ಗದರ್ಶನ ಲಭಿಸಿದರೆ ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಬಿ.ಎಂ. ಧನುಷ್ ಸಾಕ್ಷಿ ಎನ್ನುತ್ತಾರೆ ಶಾಲೆಯ ಉಪ ಪ್ರಾಂಶುಪಾಲ ಶಿವಕುಮಾರ್.