1997ರ ಆ.24ರಂದು ಜಿಲ್ಲೆಯಾಗಿ ಜನ್ಮತಾಳಿದ ಹಾವೇರಿ, ರಜತ ಮಹೋತ್ಸವಕ್ಕೆ ಕಾಲಿಡುವುದರೊಳಗೆ, ರಾಜ್ಯಕ್ಕೇ ಮುಖ್ಯಮಂತ್ರಿಯೊಬ್ಬರನ್ನು ನೀಡಿದೆ. ಕೃಷಿ ಕ್ಷೇತ್ರದ ಜೊತೆಗೆ, ರಾಜಕೀಯವಾಗಿಯೂ ರಾಜ್ಯದ ಭೂಪಟದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ, ಶಿಲ್ಪಕ್ರಾಂತಿಯ ಮೂಲಕ ದೇಸಿ ಸಂಸ್ಕೃತಿ ಎತ್ತಿ ಹಿಡಿದ ರಾಕ್ ಗಾರ್ಡನ್, ಕೃಷಿ ಮತ್ತು ಮನರಂಜನೆಯ ಸಮ್ಮಿಲನವಾದ ಅಗಡಿ ತೋಟ, ಬಾಡಾದ ಕನಕ ಅರಮನೆ, ಕಾಗಿನೆಲೆಯ ಕನಕ ಪರಿಸರಸ್ನೇಹಿ ಉದ್ಯಾನ ಮುಂತಾದ ಸ್ಥಳಗಳು ಜಿಲ್ಲೆಗೆ ಖ್ಯಾತಿ ತಂದುಕೊಟ್ಟಿವೆ.