ಹಾನಗಲ್: ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾ.17ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹಾನಗಲ್ನ ಸದಾಶಿವ ಮಂಗಲ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪ್ರಚಾರದ ಸಿದ್ಧತೆಗಳ ಉದ್ದೇಶದಿಂದ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕ್ಷೇತ್ರದ ಬಿಜೆಪಿಯಲ್ಲಿ ಅಸಮಾಧಾನ ಇಲ್ಲ. ಕೇಂದ್ರದ ಜನಪರ ಯೋಜನೆಗಳನ್ನು ಮತದಾರರಿಗೆ ಮುಟ್ಟಿಸಿ ಬವರಾಜ ಬೊಮ್ಮಾಯಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಮಾಜಿ ಸಚಿವ ಮನೋಹರ ತಹಸೀಲ್ದಾರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಚಿರಪರಿಚಿತರು. ಜನರೊಂದಿಗೆ ಹತ್ತಿರವಾಗಿರುವ ಕಾರಣಕ್ಕಾಗಿ ಅವರ ಆಯ್ಕೆ ಕ್ಷೇತ್ರದಲ್ಲಿ ಎಲ್ಲರಲ್ಲಿ ಸಂತಸ ಮೂಡಿಸಿದೆ. ಹಾವೇರಿ ಕ್ಷೇತ್ರ ಬಿಜೆಪಿ ಭದ್ರಕೋಟೆ. ಬಿಜೆಪಿಗೆ ನಾನು ಹೊಸಬ. ಹಳಬರೊಂದಿಗೆ ಸೇರಿಕೊಂಡು ಬೊಮ್ಮಾಯಿ ಗೆಲುವಿಗೆ ಹಾನಗಲ್ಲನಿಂದ ಹೆಚ್ಚು ಮತ ನೀಡುತ್ತೇವೆ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಪ್ರಮುಖರಾದ ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೇರ, ಚಂದ್ರಪ್ಪ ಹರಿಜನ, ಸಂತೋಷ ಟಿಕೋಜಿ, ವಿರುಪಾಕ್ಷಪ್ಪ, ಕಲ್ಯಾಣಕುಮಾರ ಶೆಟ್ಟರ, ಸೋಮಶೇಖರ ಕೊತಂಬರಿ ಇದ್ದರು.