ರಾಣೆಬೆನ್ನೂರು: ತಾಲ್ಲೂಕಿನ ತುಂಗಭದ್ರಾ ನದಿಯಿಂದ ಬ್ಯಾಡಗಿ ತಾಲ್ಲೂಕಿನ ಆಣೂರ-ಅರಳೀಕಟ್ಟಿ ಕೆರೆಗೆ ನೀರು ಪೂರೈಸುವ ಏತ ನೀರಾವರಿ ಯೋಜನೆ ಮುಖ್ಯಕಾಲುವೆ ಪೈಪ್ ಲೈನ್ ಬುಧವಾರ ತಾಲ್ಲೂಕಿನ ಬಿಲಹಳ್ಳಿ ಗ್ರಾಮದ ರೈತರ ಜಮೀನಿನ ಬಳಿ ತುಂಡಾಗಿದ್ದು ನೀರು ರೈತರ ಹೊಲಕ್ಕೆ ನುಗ್ಗಿ ಬೆಳೆ ಹಾನಿಯಾಗಿದೆ.
‘ಆಣೂರು ಅರಳೀಕಟ್ಟಿ ಏತ ನೀರಾವರಿ ಯೋಜನೆ ಹೊಸದಾಗಿ ಕಾರ್ಯಚರಣೆ ಮಾಡಿದ್ದೇವೆ. ನೀರಿನ ರಭಸಕ್ಕೆ ಪೈಪ್ ತುಂಡಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ಥಿ ಕಾರ್ಯ ಕೈಗೊಂಡಿದ್ದೇವೆ. ಬೆಳೆ ಹಾನಿಯ ಬಗ್ಗೆ ಸರ್ವೆ ಮಾಡಿಸಲಾಗುವುದು’ ಎಂದು ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕಾರ್ಯ ಪಾಲಕ ಎಂಜಿನಿಯರ್ ಬಸವರಾಜು ಬಿ. ತಿಳಿಸಿದರು.
‘ಕಳೆದ 8 ರಿಂದ 10 ದಿನ ಬಿಟ್ಟು ಬಿಡದೇ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಮೊದಲೇ ತೇವಾಂಶ ಹೆಚ್ಚಾಗಿದೆ. 3 ಎಕರೆ ಹತ್ತಿ, 1 ಬೆಂಡಿಕಾಯಿ, ಅರ್ಧ ಎಕರೆ ಮೆಕ್ಕೆಜೋಳದ ಬೆಳೆ ಹಾನಿಗೀಡಾಗುವ ಸಂಭವವಿದೆ. ಈಗ ಪೈಪ್ ಲೈನ್ತುಂಡಾಗಿ ಹೊಲದ ತುಂಬ ನೀರು ನಿಂತಿದೆ. ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿ ಬೆಳೆ ತೆಗೆಯುತ್ತಿದ್ದೇವೆ. ಆಳು, ಕಾಳು, ಟ್ರ್ಯಾಕ್ಟರ್ ಬಾಡಿಗೆ ಅಂದಾಜು ಎಕರೆಗೆ ₹ 30 ಸಾವಿರ ಖರ್ಚು ಬಂದಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು’ ಎಂದು ಬಿಲ್ಲಹಳ್ಳಿ ಗ್ರಾಮದ ರೈತ ಗದಿಗೆಪ್ಪ ನೀಲಪ್ಪ ಹೊಸಮನಿ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.