ಹಾನಗಲ್:ಕಾಡಿನಿಂದ ನಾಡಿಗೆ ಬಂದು ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಬಳಿ ಗ್ರಾಮಸ್ಥರು ರಕ್ಷಿಸಿದ್ದಾರೆ. ನಂತರ ಇದಕ್ಕೆ ಪ್ರಥಮ ಚಿಕಿತ್ಸೆ ನೀಡಿ, ಆರೈಕೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಕೊಪ್ಪರಸಿಕೊಪ್ಪ ಕಾಡಿನಂಚಿನ ಗ್ರಾಮ. ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿವೆ. ಅಲ್ಲಲ್ಲಿ ಕಚ್ಚಿ ಗಾಯ ಮಾಡಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ಜಿಂಕೆಯ ಬೆನ್ನು ಹತ್ತಿದ್ದ ನಾಯಿಗಳನ್ನು ಓಡಿಸಿದರು.
ಜಿಂಕೆಯನ್ನು ಹಿಡಿದು ನೀರು ಕುಡಿಸಿ, ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಜಿಂಕೆಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.