ಹಾವೇರಿ: ‘ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಯಾವ ರೀತಿ ನಡೆಯಿತು ಎಂಬುದನ್ನು ನೋಡಿದ್ದೇವೆ.ಗೋಣಿ ಚೀಲದಲ್ಲಿ ನೋಟು ತಂದು ಹಂಚುವ ಅನುಭವ ಡಿ.ಕೆ.ಶಿವಕುಮಾರ್ ಅವರಿಗಿದೆ. ಆದರೆ, ಬಿಜೆಪಿಯವರು ಹಾನಗಲ್ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಹಾನಗಲ್ ಕ್ಷೇತ್ರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಕಾಂಗ್ರೆಸ್ ಬಣ್ಣದ ಮಾತಿಗೆ ಜನ ಉತ್ತರ ಕೊಡುತ್ತಾರೆ.ಕಾಂಗ್ರೆಸ್ನವರು ವಾದದಲ್ಲಿ ಗೆಲ್ಲೋಕೆ ನೋಡುತ್ತಿದ್ದಾರೆ.ನಾವು ಜನರ ಪ್ರೀತಿ ಗೆಲ್ಲೋಕೆ ನೋಡ್ತಾ ಇದ್ದೇವೆ.ಹಾನಗಲ್ ಹಾಗೂ ಸಿಂದಗಿಯಲ್ಲಿ ಜನರ ಪ್ರೀತಿ, ವಿಶ್ವಾಸ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತಿದ್ದೇವೆ. ಅದೇ ನಮಗೆ ಶಕ್ತಿ ಎಂದು ಹೇಳಿದರು.
ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ತೋರದ ಪ್ರೀತಿಯನ್ನು ಚುನಾವಣೆ ಬಂದಾಗ ತೋರುತ್ತಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ದೊರಕಿತ್ತು. ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ. ಹೀಗಾಗಿ ಬೇರೆ ಜಿಲ್ಲೆಗೆ ಹೋಯಿತು ಎಂದು ಕುಟುಕಿದರು.
ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ನವರ ಕೆಲಸ. ಅದು ಅವರ ಕೈಯಲ್ಲಿ ಇಲ್ಲ. ಜನರು ನಾಯಕತ್ವವನ್ನು ತೀರ್ಮಾನ ಮಾಡುತ್ತಾರೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ ತಾಲ್ಲೂಕಿನ ಗಡಿಯಂಕನಹಳ್ಳಿಯ ವಂಶಿ ಫಾರ್ಮ್ನಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರವೂ ರಹಸ್ಯ ಸಭೆ ನಡೆಸಿ, ಚುನಾವಣಾ ತಂತ್ರಗಳನ್ನು ರೂಪಿಸಿದರು.
ಬೆಂಗಳೂರಿನಿಂದ ಹಾನಗಲ್ ಕ್ಷೇತ್ರಕ್ಕೆ ಬುಧವಾರ ಸಂಜೆ ಬಂದ ಅವರು ಪಕ್ಷದ ನಾಯಕರು, ಸ್ಥಳೀಯ ಮುಖಂಡರೊಂದಿಗೆ ವಂಶಿ ಫಾರ್ಮ್ನಲ್ಲಿ ರಹಸ್ಯ ಸಭೆ ನಡೆಸಿದರು. ಗುರುವಾರ ಬೆಳಿಗ್ಗೆ ಕ್ಷತ್ರೀಯ ಮರಾಠ, ಗಂಗಾಮತಸ್ಥರು, ವಾಲ್ಮೀಕಿ ಸಮುದಾಯಗಳ ಮುಖಂಡರೊಂದಿಗೆ ಸರಣಿ ಸಭೆ ನಡೆಸಿದರು.
‘ಸಮುದಾಯಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಮುಖ್ಯಮಂತ್ರಿ ಆಲಿಸಿದರು. ಚುನಾವಣೆ ನೀತಿಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡುವಂತಿಲ್ಲ. ಚುನಾವಣೆ ನಂತರ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ. ಬಿಜೆಪಿಯನ್ನು ಬೆಂಬಲಿಸಿ ಎಂದು ಸಿಎಂ ಮನವಿ ಮಾಡಿದರು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.