ತಡಸ (ದುಂಡಶಿ): ಸಕಾಲಕ್ಕೆ ಕಬ್ಬು ಕಟಾವಿಗೆ ಕಾರ್ಮಿಕರು ಸಿಗದಂತಾಗಿದ್ದು, ಬೆಳೆ ಒಣಗುವ ಮುನ್ನ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.
ಸುಮಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳಿಲ್ಲದ ಕಾರಣ ಕಬ್ಬು ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದರು. ಆದರೆ, ಕೋಣನಕೇರಿ ಹತ್ತಿರದ ವಿಐಎನ್ಪಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಿಂದಾಗಿ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಎಕರೆಯಷ್ಟು ಕಬ್ಬು ಬೆಳೆದಿದ್ದಾರೆ. ಮಳೆ ಕೊರತೆಯಿಂದಾಗಿ ಹೇಳಿಕೊಳ್ಳುವಂತಹ ಇಳುವರಿ ಬಾರದಿದ್ದರೂ, ಬೋರ್ವೆಲ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಕಬ್ಬು ಕಟಾವು ಮಾಡುವುದೇ ಅವರಿಗೆ ಚಿಂತೆಯಾಗಿ ಪರಿಣಮಿಸಿದೆ.
ಕಬ್ಬು ಕಟಾವಿಗೆ ಕಾರ್ಖಾನೆಗಳು ಮಹಾರಾಷ್ಟ್ರದ ಬೀಡ, ಸತಾರಾ, ಬಳ್ಳಾರಿ ಜಿಲ್ಲೆಯಿಂದ ಗ್ಯಾಂಗ್ಗಳನ್ನು ಕರೆಸಿವೆ. ಆದರೆ, ಇವರು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ಕಬ್ಬು ಬೆಳೆಗಾರರದ್ದಾಗಿದೆ.
ಕಬ್ಬು ಕಟಾವಿಗೆ ಕಾರ್ಖಾನೆ ವತಿಯಿಂದ ಹಣ ನೀಡುತ್ತಿದ್ದರೂ, ಗ್ಯಾಂಗ್ಗಳು ರೈತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ. ಕಬ್ಬು ಕಟಾವಿಗೆ ಬಂದಿರುವ ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಟನ್ಗೆ ₹200ರಿಂದ ₹250ಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾರ್ಖಾನೆಗೆ ಒಂದು ಲಾರಿ ಕಬ್ಬು ಸಾಗಿಸಲು ಚಾಲಕನಿಗೆ ಭತ್ಯೆಯಾಗಿ ₹400, ಕಟಾವು ಯಂತ್ರ ಚಾಲಕನಿಗೆ ದಿನಕ್ಕೆ ₹500ರಿಂದ ₹1,000, ಯಂತ್ರದ ಮಾಲೀಕನಿಗೆ ಟನ್ಗೆ ಹೆಚ್ಚುವರಿಯಾಗಿ ₹200 ನೀಡಬೇಕಾಗಿದೆ. ಕಟಾವು ಗ್ಯಾಂಗ್ನವರು ಟನ್ ಕಬ್ಬಿಗೆ ₹150ರಿಂದ ₹300 ಬೇಡಿಕೆ ಇಡುತ್ತಿದ್ದಾರೆ.
ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಗ್ಯಾಂಗ್ ಮುಂದಾಗುತ್ತಿದ್ದು, ಹಣ ನೀಡಲು ಸಾಧ್ಯವಾಗದ ಬಡರೈತರು ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಕಳುಹಿಸಲು ಪರದಾಡುವಂತಾಗಿದೆ.
ಶಿಗ್ಗಾಂವಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯವರು ಕಾರ್ಮಿಕರ ಕೊರತೆಯ ನೆಪ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವು ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.