ಹಾವೇರಿ: ಸರ್ವರಿಗೂ ಉಚಿತವಾಗಿ ಕೋವಿಡ್ ಲಸಿಕೆನೀಡಬೇಕು ಮತ್ತು ದೇಶದ ಜನರಿಗೆ ಅಗತ್ಯವಾದ ಆಮ್ಲಜನಕ, ವೆಂಟಿಲೇಟರ್, ಹಾಸಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಎಸ್ಎಫ್ಐಕೇಂದ್ರ ಸಮಿತಿ ಕರೆ ನೀಡಿದ ಅಂಗವಾಗಿ ಶುಕ್ರವಾರ ನಗರದಲ್ಲಿ ಜಿಲ್ಲಾ ಸಮಿತಿ ನೇತೃತ್ವದಲ್ಲಿಶಿವಾಜಿನಗರದ ಎಸ್ಎಫ್ಐ ಕಚೇರಿ ಎದುರು ಕಾರ್ಯಕರ್ತರು ಪೋಸ್ಟರ್ ಪ್ರದರ್ಶನ ಮಾಡಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿದೆ. ಲಸಿಕೆಯ ವೆಚ್ಚವನ್ನು ನಾಗರಿಕರ ಮೇಲೆ ಹೇರದೆ, ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು.ರಾಜ್ಯಗಳಿಗೆ ಲಸಿಕೆಗಳನ್ನು ಖಾತರಿಪಡಿಸುವ ಬದ್ಧತೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಲಸಿಕೆ ಕೊರತೆ ಹಿನ್ನೆಲೆಯಲ್ಲಿ ತಯಾರಕರು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಬೆಲೆಗಳನ್ನು ಸುಲಿಗೆ ಮಾಡಲು ಕಾರಣವಾಗುತ್ತಿದೆ ಎಂದು ತಿಳಿಸಿದರು.
ಖಾಸಗಿ ಕಂಪನಿಗಳ ಹಿತಾಸಕ್ತಿಗೆ ಸರ್ಕಾರ ಮಣಿದರೆ,ಭವಿಷ್ಯದಲ್ಲಿ ಜನರ ಸಾವು–ನೋವುಗಳು ಹೆಚ್ಚಳವಾಗುತ್ತದೆ. ಹೀಗಾಗಿ ಸರ್ವರಿಗೂ ಉಚಿತವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅರುಣ್ ಕಡಕೋಳ, ಪ್ರತೀಕ ಪಿ, ನವೀನ ಕೋರಿ, ಕಿರಣ ಎಂ, ಪ್ರಸನ್ನ ಬಿ.ಕೆ, ವೆಂಕಟೇಶ ಕಲಾಲ್ ಇದ್ದರು.