ಹಾನಗಲ್: ಮದುವೆ ನಿಶ್ಚಯ ಮಾಡಿಕೊಂಡ ಸೋದರ ಮಾವನ ಮಗಳನ್ನೇ ನೇಣು ಬಿಗಿದು ಕೊಲೆ ಮಾಡಿದ ಯುವಕ ಮಂಗಳವಾರ ಪೊಲೀಸರ ಬಂಧಿಯಾಗಿದ್ದಾನೆ.
ತಾಲ್ಲೂಕಿನ ಮೂಡೂರ ಗ್ರಾಮದ ದೀಪಾ ಮಂಜಪ್ಪ ಗೊಂದಿ (21) ಕೊಲೆಯಾದ ಯುವತಿ. ತಾಲ್ಲೂಕಿನ ಅರಳೇಶ್ವರ ಗ್ರಾಮದ ಮಾಲತೇಶ ಬಾರ್ಕಿ ಕೊಲೆಯ ಆರೋಪಿ. ಈತ ದೀಪಾಳ ತಂದೆಯ ತಂಗಿಯ ಮಗ.
ಏ.12ರಂದು ಮಾಲತೇಶ ಮತ್ತು ದೀಪಾ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮಾರ್ಚ್ 14ರಂದು ಮದುವೆ ಸಾಮಗ್ರಿಗಳ ಖರೀದಿಗಾಗಿ ಎಂದು ಹೇಳಿ ದೀಪಾಳನ್ನು ಮಾಲತೇಶ ಮನೆಯಿಂದ ಕರೆದುಕೊಂಡು ಬಂದಿದ್ದ. ಆ ಬಳಿಕ ದೀಪಾ ಕಣ್ಮರೆಯಾಗಿದ್ದಳು. ದೀಪಾ ಅವರ ಪಾಲಕರು ಹಾನಗಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
‘ನನ್ನ ಅತ್ತೆ ಮಗಳು ನನ್ನನ್ನು ಇಷ್ಟ ಪಡುತ್ತಿರಲಿಲ್ಲ. ನನ್ನ ಬಾಯಿ ಸ್ವಲ್ಪ ಸೊಟ್ಟ ಇದ್ದ ಕಾರಣ ಆಗಾಗ ಜಗಳ ಆಡುತ್ತಿದ್ದಳು. ಹೀಗಾಗಿ ಬೈಚವಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ತೋಟವೊಂದಕ್ಕೆ ದೀಪಾಳನ್ನು ಕರೆದೊಯ್ದು ವಿಷವುಣಿಸಿ, ನಂತರ ನೇಣು ಬಿಗಿದು ಸಾಯಿಸಿದ್ದೇನೆ’ ಎಂದು ಆರೋಪಿ ಮಾಲತೇಶ ಪೊಲೀಸರಿಗೆ ತಿಳಿಸಿದ್ದಾನೆ.
ಮಂಗಳವಾರ ಬೈಚವಳ್ಳಿ ರಸ್ತೆಯ ವಿದ್ಯುತ್ ಗ್ರಿಡ್ ಹಿಂಭಾಗದ ತೋಟದಲ್ಲಿ ದೀಪಾಳ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ್ ಸಿ, ಡಿವೈಎಸ್ಪಿ ಮಂಜುನಾಥ, ಹಾನಗಲ್ ಸಿಪಿಐ ವೀರೇಶ, ಪಿಎಸ್ಐ ಚಂದನ್ ಚಲುವಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.