ಶಿಗ್ಗಾವಿ (ಹಾವೇರಿ ಜಿಲ್ಲೆ): ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶಿಗ್ಗಾವಿ, ಕುಂದಗೋಳ ಹಾಗೂ ಹಳಿಯಾಳದ ಕಲಾವಿದರ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನ ನಡೆಯಲಿದೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಮಹಾರಾಷ್ಟ್ರ ರಾಜ್ಯದ ನಾಗಪುರದ ದಕ್ಷಿಣ ಮಧ್ಯ ಕ್ಷೇತ್ರದ ಸಾಂಸ್ಕೃತಿಕ ಕೇಂದ್ರದಿಂದ ಆಮಂತ್ರಣ ಪತ್ರ ಬಂದಿದೆ.
ಶಿಗ್ಗಾವಿ ಪಟ್ಟಣದ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆಯ ಕಲಾವಿದ ಶಂಕರ ಅರ್ಕಸಾಲಿ, ಸಹಾಯಕ ಕಲಾವಿದ ಶರಣ ಬಿಂದಲಗಿ, ದೊಡ್ಡಾಟದ ಪಾತ್ರಧಾರಿಗಳಿಗೆ ಪ್ರಸಾಧನ ವೇಷಭೂಷಣ ಸೇವೆ ಸಲ್ಲಿಸಲಿದ್ದಾರೆ.
ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಕಲಾವಿದರಾದ ಚಂದ್ರಶೇಖರಯ್ಯ ಗುರಯ್ಯನವರ ಕಲಾ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನವಾಗಲಿದೆ. ಅದರಲ್ಲಿ 10 ಪಾತ್ರಧಾರಿಗಳು, ಐವರು ಸಂಗೀತ ಕಲಾವಿದರು ಹಿನ್ನೆಲೆ ಸಂಗೀತ ನೀಡಲಿದ್ದಾರೆ.
ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಜ.26ರಿಂದ 29ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದು ಗಂಟೆ ದೊಡ್ಡಾಟ ಪ್ರದರ್ಶನಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಳಿಯಾಳದ ತೊಗಲುಗೊಂಬೆ ಆಟದ ಕಲಾವಿದ ಸಿದ್ದು ಬಿರಾದಾರ ಅದರ ನೇತೃತ್ವ ವಹಿಸಿದ್ದಾರೆ.