ಹಾವೇರಿ: ಅಕ್ಷರ ಜಾತ್ರೆಯಿಂದ ಇಡೀ ನಗರ ಕಳೆಗಟ್ಟಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಹೃದಯ ಭಾಗದಿಂದ ಕಲಾ ತಂಡಗಳ ಮೆರವಣಿಗೆ ಹಾದು ಹೋಗುತ್ತಿದ್ದು, ಎಲ್ಲೆಡೆ ಕನ್ನಡ ಮಾರ್ದನಿಸುತ್ತಿದೆ. ರಸ್ತೆಯುದ್ದಕ್ಕೂ ನಿಂತಿರುವ ಕನ್ನಡಾಭಿಮಾನಿಗಳು ಕಲಾ ತಂಡಗಳ ಮೇಲೆ ಹೂಮಳೆಗರೆದು ಸ್ವಾಗತಿಸುತ್ತಿದ್ದಾರೆ. ಕನ್ನಡಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕುತ್ತಿದ್ದಾರೆ.
ರಸ್ತೆಯುದ್ದಕ್ಕೂ ಕನ್ನಡ ಧ್ವಜಗಳು, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ. ವೃತ್ತಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ.
ಮೆರವಣಿಗೆ ಕಣ್ತುಂಬಿಕೊಳ್ಳಲು ಜನ ಕಟ್ಟಡಗಳ ಮೇಲೇರಿ ಕುಳಿತಿದ್ದಾರೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮೆರವಣಿಗೆಯಿಂದ ಇಡೀ ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.