ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಯೋಜನೆಯಾದ ₹34 ಕೋಟಿ ವೆಚ್ಚದ ಶಿಗ್ಗಾವಿ ಏತ ನೀರಾವರಿ ಯೋಜನೆಯ 39 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಬುಧವಾರ ಬೊಮ್ಮಾಯಿ ಅವರೇ ಚಾಲನೆ ನೀಡಿದರು.
ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಬುಧವಾರ ₹3.30 ಕೋಟಿ ವೆಚ್ಚದ ಕುಮಟಾ- ತಡಸ ರಸ್ತೆ ಸುಧಾರಣಾ ಕಾಮಗಾರಿಗೂ ಮುಖ್ಯಮಂತ್ರಿ ಚಾಲನೆ ನೀಡಿದರು.
ತವರು ಕ್ಷೇತ್ರಕ್ಕೆ ಬಂದ ಮುಖ್ಯಮಂತ್ರಿಗಳಿಗೆ ಜನರಿಂದ ಅದ್ದೂರಿ ಸ್ವಾಗತ ದೊರೆಯಿತು.
ನಂತರ ₹ 2 ಕೋಟಿ ವೆಚ್ಚದ ಪಡುಬಿದ್ರಿ- ಚಿಕ್ಕಾಲಗುಡ್ಡ ರಸ್ತೆ ಸುಧಾರಣಾ ಕಾಮಗಾರಿಗೆ ಬೊಮ್ಮಾಯಿ ಚಾಲನೆ ನೀಡಿದರು. ₹ 2.50 ಕೋಟಿ ವೆಚ್ಚದ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟಿಸಿದರು.
ನಂತರ ಕುನ್ನೂರು, ದುಂಡಶಿ, ಕೋಣನಕೆರೆ ಮಾರ್ಗವಾಗಿ ಬಂದ ಮುಖ್ಯಮಂತ್ರಿ ಅವರನ್ನು ಸಾಂಪ್ರದಾಯಿಕ ಇಳಕಲ್ ಸೀರೆ ಧರಿಸಿದ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ, ಆರತಿ ಬೆಳಗಿ ಬರಮಾಡಿಕೊಂಡರು. ಅಭಿಮಾನಿಗಳು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗಿ ಸಂತಸ ವ್ಯಕ್ತಪಡಿಸಿದರು.