ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರ ಬದಲಾವಣೆಗೆ ಕರ್ನಾಟಕ ಜನಸೈನ್ಯ ಆಗ್ರಹ

Last Updated 24 ಜನವರಿ 2021, 8:18 IST
ಅಕ್ಷರ ಗಾತ್ರ

ಹಾವೇರಿ: ‘ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳುವ ಮೂಲಕ ಕನ್ನಡ ವಿರೋಧಿ ನೀತಿಯನ್ನು ಅನುಸರಿಸಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರನ್ನು ಬದಲಾವಣೆ ಮಾಡಬೇಕು’ ಎಂದು ‘ಕರ್ನಾಟಕ ಜನಸೈನ್ಯ’ದ ರಾಜ್ಯ ಘಟಕದ ಅಧ್ಯಕ್ಷ ಕೆ.ಎರ್ರಿಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಇಂಗ್ಲಿಷ್‌ ಭಾಷೆ ಮೇಲೆ ವ್ಯಾಮೋಹವನ್ನು ಇಟ್ಟುಕೊಂಡಿರುವ ಕನ್ನಡಿಗರು ಹಿಂದಿ ಭಾಷೆಯನ್ನು ಏಕೆ ವಿರೋಧಿಸಬೇಕು ಎಂದು ದೊಡ್ಡರಂಗೇಗೌಡ ಹೇಳಿದ್ದಾರೆ. ಕನ್ನಡದ ಪರವಾಗಿ ಬದ್ಧತೆ ಇಲ್ಲದಿರುವ ಅನ್ಯಭಾಷೆಗಳನ್ನು ಪ್ರೀತಿಸುವವರು ಸಮ್ಮೇಳನದ ಅಧ್ಯಕ್ಷರಾಗಿರುವುದು ಉಚಿತವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಚಿಕ್ಕಂದಿನಿಂದ ದೊಡ್ಡರಂಗೇಗೌಡರ ಸಾಹಿತ್ಯವನ್ನು ಓದಿಕೊಂಡು ಬೆಳೆದವರು. ಅವರ ಬಗ್ಗೆ ಗೌರವವಿದೆ. ಆದರೆ, ಅವರ ಹೇಳಿಕೆ ಗಮನಿಸಿದರೆ ಕೇಂದ್ರ ಸರ್ಕಾರ ಅಥವಾ ಹಿಂದಿಯ ಗುಲಾಮರಾಗಿದ್ದಾರಾ ಎಂಬ ಅನುಮಾನ ಬರುತ್ತದೆ. ಹಿಂದಿ ಪರ ಹೇಳಿಕೆ ಖಂಡಿಸಿ, ಸಮ್ಮೇಳನದಲ್ಲಿ ನಮ್ಮ ಜನಸೈನ್ಯದ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸುತ್ತೇವೆ ಮತ್ತು ಕಪ್ಪು ಪಟ್ಟಿ ಧರಿಸಿ ಭಾಗವಹಿಸುತ್ತೇವೆ.ಈ ಬಗ್ಗೆ ದೊಡ್ಡರಂಗೇಗೌಡರ ಮತ್ತು ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಪ್ರತಿಕ್ರಿಯೆ ನೋಡಿಕೊಂಡು ಹೋರಾಟ ನಿರ್ಧಾರ ಮಾಡುತ್ತೇವೆ’ ಎಂದರು.

ಹಾವೇರಿ ನೆಲದವರಾದ ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ಜನ್ಮದಿನ ಫೆ.20ರಂದು ಇದೆ. ಈ ಸಂತ ಕವಿಯ ಹೆಸರನ್ನು ಸಮ್ಮೇಳನದ ಮುಖ್ಯ ವೇದಿಕೆಗೆ ಮತ್ತು ಪ್ರಮುಖ ದ್ವಾರಕ್ಕೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಮಂಜಪ್ಪ ಶರಣರು, ನಾಗನಗೌಡ, ಮಲ್ಲೇಶಣ್ಣ ಗುತ್ತೆಣ್ಣನವರ್‌, ಲಿಂಗರಾಜ ಕುಮಾರ್‌, ರೇವಣಪ್ಪ ಕುಂಬಾರ್‌, ಬಸವರಾಜ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT