ಹಾವೇರಿ: ‘ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಸ್ವಾತಂತ್ರ್ಯ ಭಾರತದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ. ಪ್ರತಿಯೊಬ್ಬ ವಿಚಾರಣಾಧೀನ ಕೈದಿಯು ಘನತೆಯಿಂದ ಬದುಕುವುದನ್ನು ಕಲಿಯಬೇಕು’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಲೋಕೇಶ ಟಿ.ಕೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಚಾರಣಾಧೀನ ಕೈದಿಗಳಾಗಿ ಕಾರಾಗೃಹದಲ್ಲಿರುವವರ ಪೈಕಿ ಶೇಕಡಾ ಶೇ 70ರಷ್ಟು ಯುವಕರೇ ಇರುವುದರಿಂದ ಇಲ್ಲಿಗೆ ನಿಮ್ಮ ಭವಿಷ್ಯ ಮುಗಿಯುವುದಿಲ್ಲ. ಇನ್ನು ಮುಂದೆ ಒಳ್ಳೆಯ ಭವಿಷ್ಯವಿದೆ. ನಿಜವಾಗಿ ತಪ್ಪು ಮಾಡಿದ್ದರೆ ಆತ್ಮಾವಲೋಕ ಮಾಡಿಕೊಳ್ಳಿ, ಪರಿವರ್ತನೆಯಾಗಿ ಎಂದು ಸಲಹೆ ನೀಡಿದರು.
ಮಹಿಳಾ ಸಾಂತ್ವನ ಕೇಂದ್ರದ ಪರಿಮಳಾ ಜೈನ್ ಮಾತನಾಡಿ, ಸಣ್ಣ-ಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಹಂಸಕ್ಷೀರ ಪಕ್ಷಿಗಳಂತೆ ಬದುಕನ್ನು ಕಟ್ಟಿಕೊಳ್ಳವುದನ್ನು ಕಲಿಯಬೇಕು. ಯಾವುದೋ ಕ್ಷಣದಲ್ಲಿ ನೀವು ತಪ್ಪು ಎಸಗಿ ಕಾರಾಗೃಹದಲ್ಲಿ ಬಂದಿಯಾಗಿದ್ದೀರಿ. ಇಲ್ಲಿಗೆ ನಿಮ್ಮ ಬದುಕು ಮುಗಿವುದಿಲ್ಲ. ಉತ್ತಮ ಭವಿಷ್ಯವಿದೆ. ಇಲ್ಲಿಂದ ಬಿಡುಗಡೆಯಾಗಿ ತೆರಳಿದಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಹಾರೈಸಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ದೇಶಭಕ್ತಿ ಗೀತ ಗಾಯನ ಕಾರ್ಯಕ್ರಮಗಳು ನಡೆದವು. ಕವಿಗಳಾದ ಅಡಿವೆಪ್ಪ ಕುರಿಯವರ, ಫಕ್ಕೀರಪ್ಪ ಗೊರವರ ಹಾಗೂ ಮಂಜುನಾಥ ವಾಲ್ಮೀಕಿ ಅವರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ಡಾ.ಶಾರದಾ ಮಳ್ಳೂರ ರಚಿಸಿದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈಲರ್ ಯಲ್ಲಮ್ಮ ಹರವಿ, ಎಸ್.ಆರ್. ಹಿರೇಮಠ, ಬಸವರಾಜ ಶಿಗ್ಗಾವಿ, ನಾಟಕ ನಿರ್ದೇಶಕ ಕೃಷ್ಣಮೂರ್ತಿ, ಕಾರಾಗೃಹ ಸಿಬ್ಬಂದಿ ಇದ್ದರು.