ರಾಣೆಬೆನ್ನೂರು: ‘ಸೀಮಂತ ಕಾರ್ಯದಲ್ಲಿಯ ಲಿಂಗದೀಕ್ಷಾ ಸಂಸ್ಕಾರವು ಮಗುವಿನ ಗುಣ ಸ್ವಭಾವಗಳಲ್ಲಿ ಪ್ರಭಾವ ಬೀರುತ್ತದೆ. ಮಾಂಸಪಿಂಡದ ಈ ಶರೀರವನ್ನು ಮಂತ್ರಬಂಡವಾಗಿ ಪರಿವರ್ತಿಸುವ ಈ ಶಿವ ದೀಕ್ಷಾ ಹಂತವು ಮಹತ್ವದ್ದಾಗಿದೆ’ ಎಂದು ದಿಂಡದಹಳ್ಳಿ ಹಿರೇಮಠದ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಮೇಡ್ಲೇರಿ ರಸ್ತೆಯ ಲಿಂ. ಶಿವಾನಂದ ತಪೋಮಂದಿರದಲ್ಲಿ ಈಚೆಗೆ ನಡೆದ ಅಖಂಡ 26ನೇ ವರ್ಷದ ಅಯ್ಯಾಚಾರ- ಶಿವ ದೀಕ್ಷಾ ಹಾಗೂ ಧರ್ಮಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೀರಶೈವ ಧರ್ಮ ಪರಂಪರೆಯಲ್ಲಿ ಶಿವ ದೀಕ್ಷಾ ಕಾರ್ಯಕ್ರಮ ದೀಕ್ಷಾರ್ಥಿಯ ಜೀವನವನ್ನೇ ಬದಲಾಯಿಸಬಲ್ಲದು. ಶಿವದೀಕ್ಷಾ ಸಂಸ್ಕಾರದಿಂದ ಮಾನವ ಜಂಗಮನಾಗುತ್ತಾನೆ. ಗುರುವಿನ ಸಂಪೂರ್ಣ ಜ್ಞಾನಧಾರೆಯ ನಂತರ ಸಮಾಜಕ್ಕೆ ಹಿಂದಿರುಗುವ ಶುಭ ದೀಕ್ಷಾ ವಟುವು ಸಮಾಜಮುಖಿ, ಸಮಾಜವನ್ನು ಉದ್ಧರಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾನೆ’ ಎಂದರು.
ಕುರವತ್ತಿ ಮಠದ ರುದ್ರಮುನಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕಕಲ್ಯಾಣಾರ್ಥವಾಗಿ, ವಿಶ್ವ ಶಾಂತಿಗಾಗಿ, ರೈತರ ನೆಮ್ಮದಿಗಾಗಿ ಸಕಾಲಕ್ಕೆ ಮಳೆ ಬೆಳೆ ಸಮೃದ್ಧಿಗಾಗಿ, ದೇಶದ ರಾಜಕೀಯ ಸ್ಥಿರತೆಗಾಗಿ ವೀರಭದ್ರೇಶ್ವರ ಹೋಮ ನೆರವೇರಿಸಲಾಯಿತು. ನಂತರ ಮರುಳ ಸಿದ್ದೇಶ್ವರ ಸ್ವಾಮಿಯ ಹೂವಿನ ತೇರು ಪಂಚಾಚಾರ್ಯರ ಸಾಂಕೇತಿಕ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು.