ಬ್ಯಾಡಗಿ: ಚುನಾವಣಾ ಕರ್ತವ್ಯಕ್ಕೆ ಪೂರ್ವಾನುಮತಿ ಪಡೆಯದೇ ಗೈರಾದ ಇಬ್ಬರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಸಹಾಯ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ಆದೇಶಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಹಾವೇರಿ–ಗದಗ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಕರ್ತವ್ಯ ಲೋಪವೆಸಗಿದ ರಾಣೆಬೆನ್ನೂರ ತಾಲ್ಲೂಕಿನ ಹನುಮಾಪುರದ ಮತಗಟ್ಟೆ ಮೇಲ್ವಿಚಾರಕ ಗಿರೀಶ ಪಾಟೀಲ ಮತ್ತು ಉಕ್ಕುಂದ ಮತಗಟ್ಟೆ ಮೇಲ್ವಿಚಾರಕ ಐ.ಎಂ.ತಹಶೀಲ್ದಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
ಚುನಾವಣಾ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡುವುದು, ಹೇಳದೇ ಕೇಳದೇ ಗೈರಾಗುವುದು ಬೇಜವಾಬ್ದಾರಿಯ ವರ್ತನೆಯಾಗಿದೆ. ಅಂತವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.
ಪೋಲಿಂಗ್ ಬೂತಗಳನ್ನು ಸೆಕ್ಟರ್ ಅಧಿಕಾರಿಗಳು ಎರಡ್ಮೂರು ಬಾರಿ ಪರಿಶೀಲಿಸಬೇಕು. ಹಿರಿಯ ಅಧಿಕಾರಿಗಳು ಭೇಟಿ ನೀಡಿದ ವೇಳೆ ಮೂಲ ಸೌಲಭ್ಯಗಳ ಕೊರತೆ ಕಂಡು ಬಂದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಯುವ ಮತದಾರರ ಸೇರ್ಪಡೆ, ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ. ಮತದಾರರಿಗೆ ಅಗತ್ಯವಾದ ಮಾಹಿತಿಗಳು ಪತ್ರಿಕಾ ಮಾಧ್ಯಮಗಳ ಮೂಲಕ ತಲುಪುವಂತೆ ನಿಗಾವಹಿಸಬೇಕು ಎಂದು ಹೇಳಿದರು.