ಹಾವೇರಿ: ಕೇಂದ್ರ ಸರ್ಕಾರವು ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪ ನೇಮಕಾತಿಯನ್ನು ಮಾಡಲು ನೂತನ ನೀತಿಯೊಂದನ್ನು ರಚನೆ ಮಾಡಲು ಹೊರಟಿರುವ ಕ್ರಮ ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.
ಪ್ರಾದೇಶಿಕ ಭಾಷೆಯನ್ನು ಐಚ್ಛಿಕವಾಗಿ ಓದಿರುವ ಕನ್ನಡಿಗರಾದ ನಮಗೆ ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಇದರಿಂದ ಕರ್ನಾಟಕ ಗ್ರಾಮೀಣ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಲು ತೊಡಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ವಿದ್ಯಾವಂತ ಯುವಜನಾಂಗ ನಿರುದ್ಯೋಗದಿಂದ ಗುಳೇ ಹೋಗುತ್ತಿದ್ದಾರೆ. ಏಕರೂಪ ರಾಷ್ಟ್ರೀಯ ನೀತಿ ಜಾರಿಯಾದರೆ ಮತ್ತಷ್ಟು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಈ ನೀತಿಯನ್ನು ಕೈಬಿಡಿ ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಎನ್. ಬೆಂಗಳೂರ, ರಮೇಶ ಆನವಟ್ಟಿ, ರಮೇಶ ಜಾಲಿಹಾಳ ಇತರ ಪದಾಧಿಕಾರಿಗಳು ಇದ್ದರು.