ಹಾವೇರಿ: ನಗರದ ಹೊಸಮಠ ಬಸವಕೇಂದ್ರದಿಂದ ನೀಡುವ ‘ಡಾ.ಶಿಮುಶ ಪ್ರಶಸ್ತಿ’ಗೆ ಈ ಬಾರಿ ಸಾಹಿತ್ಯ ಚಿಂತಕ ಮತ್ತು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಆಯ್ಕೆಯಾಗಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ತ ಹಾವೇರಿಯಲ್ಲಿ ಡಿ.20ರಂದು ನಡೆಯುವ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಡಾ.ನಾ.ಡಿಸೋಜ, ಕೆ.ಎಸ್.ಪುಟ್ಟಣ್ಣಯ್ಯ, ಬಿ.ಎಲ್.ವೇಣು ಸೇರಿದಂತೆ ಇದುವರೆಗೆ 9 ಮಂದಿಗೆ ‘ಡಾ.ಶಿಮುಶ ಪ್ರಶಸ್ತಿ’ ಕೊಡಲಾಗಿದೆ. ಪ್ರಶಸ್ತಿಯು ₹50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.