ಶಿಗ್ಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯ ನೆಹರೂ ಗಾರ್ಡನ್ ಆವರಣದಲ್ಲಿ ಸೋಮವಾರ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.
ಪಟ್ಟಣದ ನಿವಾಸಿಗಳಾದ ಸೋಮಶೇಖರ ಗೌರಿಮಠ, ಗಂಗಾಧರ ಮಾಮ್ಲೆಪಟ್ಟಣಶೆಟ್ಟರ, ಮೋಹನ ಮಿರಜಕರ, ಈರಣ್ಣ ಬಳಿಗಾರ, ಹನಮಂತ ಹೊಸಮನಿ ಅವರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ.
‘ನೆಹರು ಗಾರ್ಡನ್ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಇದರಿಂದ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿರಲಿಲ್ಲ. ನ್ಯಾಯಾಲಯದಲ್ಲಿನ ವ್ಯಾಜ್ಯ ಇತ್ಯಾರ್ಥವಾಗಿಲ್ಲ. ಅದಕ್ಕೆ ರಾಮನ ಪೂಜೆಗೆ ಅವಕಾಶ ನೀಡಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ ತಿಳಿಸಿದರು.
ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ ಮಾತನಾಡಿ,‘ನಮಗೆ ಇಲ್ಲಿ ರಾಮನ ಪೂಜೆ ಮಾಡಲು ಅವಕಾಶ ಕೊಡದೆ ಅವಮಾನ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೋರಾಟ ಮಾಡುತ್ತೇವೆ’ ಎಂದರು.
‘ಮುಂಜಾಗ್ರತೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಐವರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ’ ಎಂದು ಬಂಕಾಪುರ ಠಾಣೆಯ ಪಿಎಸ್ಐ ನಿಂಗರಾಜ ಕರಕಣ್ಣನವರ ತಿಳಿಸಿದರು. ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.