ಹಾವೇರಿ:ಕಾರ್ಮಿಕ ಕಾರ್ಡುಗಳನ್ನು ಮಾಡಲು ಅರ್ಜಿ ಹಾಕಿ 6 ತಿಂಗಳುಗಳೇ ಕಳೆದರೂ ಈವರೆಗೂ ಕಾರ್ಡುಗಳನ್ನು ಪೂರೈಸಿಲ್ಲ. ಅಲ್ಲದೆ ಸೇವಾಸಿಂಧು ನಿಂತುಹೋಗಿ ಎರಡು ತಿಂಗಳುಗಳೇ ಕಳೆದಿವೆ. ಇದರಿಂದ ವಿವಿಧ ಸೌಕರ್ಯಗಳಿಗಾಗಿ ಅರ್ಜಿ ಹಾಕುವುದು ಸಮಸ್ಯೆಯಾಗಿದೆ ಎಂದುಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಗಳು ಜಂಟಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಿಗೆ ಪಾಸ್ ಕೊಟ್ಟಂತೆ ಎಲ್ಲೆಡೆಯಲ್ಲಿಯೂ ಕೂಡ ಉಚಿತ ಬಸ್ ಪಾಸ್ ಕೊಡಬೇಕು. ಕಾರ್ಮಿಕ ಚಿಕಿತ್ಸಾ ಭಾಗ್ಯವನ್ನು ಕಾರ್ಮಿಕನ ಕುಟುಂಬದ ಎಲ್ಲ ಸದಸ್ಯರಿಗೆ ವಿಸ್ತರಿಸಬೇಕು. ಪಿಂಚಣಿ ಯೋಜನೆಗೆ, ಮದುವೆ ಸಹಾಯಧನಕ್ಕೆ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕೆಂಬ ಕಾಲಮಿತಿಯನ್ನು ತೆಗೆದುಹಾಕಬೇಕು. ಗೃಹ ಭಾಗ್ಯ ಯೋಜನೆಯ ಷರತ್ತುಗಳನ್ನು ಎಲ್ಲಾ ಅರ್ಹ ಕಾರ್ಮಿಕರಿಗೆ ಸಿಗುವಂತೆ ಸರಳೀಕರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಎಲ್ಲ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ 5000/ರೂ ಎಲ್ಲರಿಗೂ ದೊರೆತಿಲ್ಲ. ಏಜೆಂಟರ ಹಾವಳಿ ಮತ್ತು ಶೋಷಣೆಯನ್ನು ತಪ್ಪಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಯ ಗಂಗಾಧರ್ ಬಡಿಗೇರ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ನಾಯಕರಾದ ರಾಜು ಆಲದಹಳ್ಳಿ, ದಾದಾಪೀರ್ ತಿಳವಳ್ಳಿ, ಚಂದ್ರಶೇಖರ್ ಕಜ್ಜೇರ್, ನಾಗರಾಜ್ ಮದ್ಲೂರ್ ಇದ್ದರು.