ಹಾನಗಲ್: ತಾಲ್ಲೂಕಿನ ಗೆಜ್ಜಿಹಳ್ಳಿ ಗ್ರಾಮದ ಮಾಲತೇಶ ಶಿವಬಾರದ ಕಾಣಿಕೆ ಹುಂಡಿ ಕಳುವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಕಾಣಿಕೆ ಹುಂಡಿಯಲ್ಲಿ ಸುಮಾರು ₹60 ಸಾವಿರವಿತ್ತೆಂದು ಅಂದಾಜಿಸಲಾಗಿದೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಹಾನಗಲ್-ಹಾವೇರಿ ರಾಜ್ಯ ಹೆದ್ದಾರಿಯಲ್ಲಿರುವ ಈ ಶಿವಬಾರದ ಮುಂದೆ ಇಡಲಾಗಿದ್ದ ಕಾಣಿಕೆ ಹುಂಡಿಯನ್ನು ಒಡೆಯಲಾಗಿದೆ. ಹುಂಡಿಯ ಒಳಗಿದ್ದ ಸಣ್ಣ ಪೆಟ್ಟಿಗೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿರುವ ಕಳ್ಳರು, ಸಮೀಪದ ಧರ್ಮಾ ನದಿ ತಟದಲ್ಲಿ ಪೆಟ್ಟಿಗೆಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ.
ಪೆಟ್ಟಿಗೆಯಲ್ಲಿದ್ದ ಚಿಲ್ಲರೆ ಹಣವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಪೆಟ್ಟಿಗೆ ಮತ್ತು ಚಿಲ್ಲರೆ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಗ್ರಾಮದ ವಕೀಲ ವಿನಾಯಕ ಕುರುಬರ ತಿಳಿಸಿದ್ದಾರೆ.