ಹಿರೇಕೆರೂರ: ನಿವೇಶನದ ಹಕ್ಕು ಪತ್ರ ನೀಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ತಾವರಗಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕಾರ ಮಾಡುವ ತೀರ್ಮಾನ ಕೈಗೊಂಡರು.
ಗ್ರಾಮದ ಹೊಂಡದ ಸಮೀಪದ ಜನತಾ ಪ್ಲಾಟ್ ಹಾಗೂ ಕಡೆಕೇರಿಯ ಜನವಸತಿ ಪ್ರದೇಶಗಳಲ್ಲಿ ಸುಮಾರು 45 ವರ್ಷಗಳಿಂದ 65 ಕುಟುಂಬಗಳು ವಾಸವಾಗಿವೆ. ಹಿಂದುಳಿದ ಜನಾಂಗಕ್ಕೆ ಸೇರಿರುವ ಈ ಕುಟುಂಬಗಳು ಗ್ರಾಮ ಪಂಚಾಯ್ತಿಯಿಂದ ಹಂಚಿಕೆಯಾದ ನಿವೇಶನಗಳಲ್ಲಿ ವಾಸಿಸಿತ್ತ ಬಂದಿದ್ದರೂ ಇಲ್ಲಿಯವರೆಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಪಂಚಾಯ್ತಿ ದಾಖಲೆಗಳಲ್ಲಿ ಹೆಸರಿದ್ದರೂ ಇ-ಸ್ವತ್ತು ಮಾಡಲು ಬರುವುದಿಲ್ಲ ಎಂದು ಪಿಡಿಒ ಸಬೂಬು ಹೇಳುತ್ತಿದ್ದಾರೆ. ಪಿಡಿಒ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕುಪತ್ರ ನೀಡದೇ ಹೋದರೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸದೇ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.