ದನದ ಕೊಟ್ಟಿಗೆಯಂತಿರುವ ವಸತಿ ಶಾಲೆ!
ಶಿಗ್ಗಾವಿ: ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆಯ ಅಡುಗೆ ಕೋಣೆ ಸ್ವಚ್ಛತೆಯಿಲ್ಲದೆ ದನದ ಕೊಟ್ಟಿಗೆಗಿಂತ ಕಡೆಯಾಗಿದೆ. ಅಲ್ಲಿ ಮಕ್ಕಳು ಕುಳಿತುಕೊಂಡು ಊಟ ಉಪಾಹಾರ ಸೇವಿಸಲು ಹೇಗೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅಸಮಾಧಾನ ವ್ಯಕ್ತಪಡಿಸಿದರು. ಆಹಾರ ಧಾನ್ಯಗಳನ್ನು ಅಡುಗೆಗೆ ಮುನ್ನ ಸ್ವಚ್ಛ ಮಾಡುತ್ತಿಲ್ಲ. ಅಡುಗೆ ಮಾಡಿರುವ ಪಾತ್ರೆಗಳನ್ನು ಸರಿಯಾಗಿ ತೊಳೆಯುತ್ತಿಲ್ಲ. ನಿನ್ನೆ ಮಾಡಿರುವ ಅನ್ನ ಸಾಂಬಾರ್ ಪಾತ್ರೆಗಳು ಹಾಗೇ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಲಾ ಆವರಣದಲ್ಲಿ ಕಸದ ರಾಶಿ ಹಾಗೆ ಬಿದ್ದಿದ್ದು ಇಲ್ಲಿನ ಸಿಬ್ಬಂದಿ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ. ಮೆನು ಪ್ರಕಾರ ಮಕ್ಕಳಿಗೆ ಆಹಾರ ಕೊಡುತ್ತಿಲ್ಲ ಆಹಾರ ದಾಸ್ತಾನು ಬಗ್ಗೆ ದಾಖಲಾತಿ ಸಮರ್ಪಕವಾಗಿಲ್ಲ ಎಂಬುದನ್ನು ತಿಳಿದ ಸದಸ್ಯ ಶೇಖರಗೌಡ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪ್ರಾಚಾರ್ಯ ಮತ್ತು ವಾರ್ಡನ್ ಇಬ್ಬರಿಗೂ ಸಮನ್ಸ್ ಜಾರಿ ಮಾಡುವುದಾಗಿ ಶೇಖರಗೌಡ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅಣ್ಣಪ್ಪ ಹೆಗಡೆ ಇದ್ದರು.