ಪ್ರದೀಪ ಕುಲಕರ್ಣಿ
ರಟ್ಟೀಹಳ್ಳಿ: ಪಟ್ಟಣದ ಕುರಬಗೇರಿ ಓಣಿಯಲ್ಲಿರುವ ತುಳಜಾ ಪರಮೇಶ್ವರಿ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಭಕ್ತರ ಇಷ್ಟಾರ್ಥ ಕರುಣಿಸುವ ದೇವಸ್ಥಾನ ಅಂತಲೇ ಹೆಸರುವಾಸಿಯಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾವ್ ಬೋಸ್ಲೆ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇವರ ಆಡಳಿತದ ಬಳಿಕ ಪಾಳುಬಿದ್ದಿದ್ದ ದೇವಸ್ಥಾನವನ್ನು 21 ವರ್ಷಗಳ ಹಿಂದೆ ಸ್ಥಳೀಯ ಮರಾಠ ಸಮಾಜದವರು ಜೀರ್ಣೋದ್ಧಾರಗೊಳಿಸಿ ಕಮಿಟಿ ರಚಿಸಿದರು. ಅಂದಿನಿಂದ ತುಳಜಾ ಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯಪೂಜೆ ನಡೆಯುತ್ತಿದೆ.
ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಪ್ರತಿದಿನ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಅಲಂಕಾರ ಸರ್ವಸೇವಾ, ದುರ್ಗಾ ಸಪ್ತಶತೀ ಪಾರಾಯಣ, ನೈವೇದ್ಯ, ದೇವಿಪುರಾಣ ಪ್ರವಚನ, ಮಂತ್ರಪುಷ್ಪ, ಮಹಾಮಂಗಳಾರತಿ ಸೇವೆಗಳು ಜರುಗುತ್ತಿವೆ.
ದೇವಸ್ಥಾನದಲ್ಲಿ ಅ.22ರಂದು ದುರ್ಗಾಷ್ಟಮಿ, ಶಸ್ತ್ರ ಪೂಜನ, 23ರಂದು ಮಹಾನವಮಿ ಕೂಷ್ಮಾಂಡಬಲಿ, ಬನ್ನಿ ಮುಡಿಯುವುದು, ಅ.28ರಂದು ಸೀಗೆ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಅರ್ಚಕ ಗಿರೀಶ ನಾಡಗೇರ ತಿಳಿಸಿದರು.
ದೇವಸ್ಥಾನದ ಟ್ರಸ್ಟ್ನಿಂದ ಪ್ರತಿ ವರ್ಷ ನವೆಂಬರ್ನಲ್ಲಿ ದೇವಿಯ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸುಮಾರು 15 ವರ್ಷಗಳಿಂದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವಚಂಡಿಯಾಗ, ಸತ್ಯನಾರಾಯಣ ಪೂಜೆ, ಉಡಿತುಂಬುವ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗುತ್ತದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಭೈರಪ್ಪನವರ.
ತುಳಜಾ ಪರಮೇಶ್ವರಿ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಆಗಮಿಸುತ್ತಾರೆ. ಇಷ್ಟಾರ್ಥಗಳ ಸಿದ್ಧಿಗಾಗಿ ವಿಶೇಷ ಹರಕೆ ಪೂಜೆ ಸಲ್ಲಿಸುತ್ತಾರೆಪರಶುರಾಮ ಸುರ್ವೆ ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.