ಹಾವೇರಿ: ಜಿಲ್ಲೆಯ ವಿವಿಧ ಮಾರಾಟ ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ₹2.1 ಕೋಟಿ ಮೌಲ್ಯದ 686 ಕ್ವಿಂಟಲ್ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ಮಾತಾ ಸೀಡ್ಸ್ ಕಂಪನಿಯವರು ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಬಿತ್ತೆನ ಬೀಜವನ್ನು ವಶಪಡಿಸಿಕೊಂಡು, ವರ್ತಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ, ಸಹಾಯಕ ಕೃಷಿ ನಿರ್ದೇಶಕರಾದ ಪ್ರಾಣೇಶ, ನಾರನಗೌಡ, ಸುನಿಲ್ ನಾಯ್ಕ, ಹಿತೇಂದ್ರ ಗೌಡಪ್ಪಳವರ ತಂಡ ದಾಳಿ ನಡೆಸಿತು.
‘ಯಾವುದೇ ಮಾರಾಟಗಾರರು ಪರವಾನಗಿ ಇಲ್ಲದೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು ಹಾಗೂ ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಎಚ್ಚರಿಕೆ ನೀಡಿದ್ದಾರೆ.