ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಕಿಆಲೂರು | 'ಜಾಗರೂಕರಾಗಿ, ಎಚ್ಚರಿಕೆಯಿಂದ ಮತ ಚಲಾಯಿಸಿ'

ಹಾವೇರಿ- ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮನವಿ
Published 23 ಮಾರ್ಚ್ 2024, 16:09 IST
Last Updated 23 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ಅಕ್ಕಿಆಲೂರು: ‘ಧರ್ಮ, ದೇವರ ಹೆಸರು ಹೇಳಿ ಮತಯಾಚಿಸದೇ ಕೆಲಸ, ಸಾಧನೆ ಮುಂದಿಟ್ಟು ಮತಯಾಚಿಸಬೇಕು. ಕೆಲಸ, ಸಾಧನೆ ಮಾಡದ ಬಿಜೆಪಿ ಸುಳ್ಳು ಹೇಳಿ, ಭಾವನಾತ್ಮಕವಾಗಿ ಮಾತನಾಡಿ ಮತ ಕೇಳುತ್ತಿದೆ. ಜಾಗರೂಕರಾಗಿ, ಎಚ್ಚರಿಕೆಯಿಂದ ಮತ ಚಲಾಯಿಸದಿದ್ದರೆ ಜನಸಾಮಾನ್ಯರ ಬದುಕನ್ನು ಬಿಜೆಪಿ ಮತ್ತೆ ಕತ್ತಲೆಗೆ ನೂಕಲಿದೆ’ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಆತಂಕ ವ್ಯಕ್ತಪಡಿಸಿದರು.

ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೆಲೆ ಏರಿಕೆ ನಿಯಂತ್ರಿಸುವುದಾಗಿ ಸುಳ್ಳು ಹೇಳಿ ಅಧಿಕಾರ ಹಿಡಿದ ಬಿಜೆಪಿ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ. ಉದ್ಯೋಗ ನಷ್ಟದಿಂದ ಯುವ ಸಮೂಹ ಬಸವಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ದೇಶದ ಜನತೆ ದ್ವೇಷ, ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕಿದೆ. ಚುನಾವಣೆಯಲ್ಲಿ ಅವಕಾಶ ನೀಡಿದರೆ ಜನಮೆಚ್ಚುವಂತೆ ಕೆಲಸ ಮಾಡಿ ತೋರಿಸುವೆ’ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಬಡವರು, ರೈತರ ಏಳಿಗೆ ಬಗೆಗೆ ಚಿಂತನೆ ನಡೆಸುವ ಬದಲಿಗೆ ಹೊಟ್ಟೆ ತುಂಬದ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾ, ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ. ಸಂವಿಧಾನದ ಉಳಿವಿಗೆ ಬಿಜೆಪಿ ಸೋಲಿಸಲು ಪ್ರತಿಯೊಬ್ಬರೂ ದೃಢಸಂಕಲ್ಪ ಮಾಡಬೇಕಿದೆ. ಬಿಜೆಪಿಯ ಜನವಿರೋಧಿ ನೀತಿಗಳು, ಆಡಳಿತ ವೈಫಲ್ಯಗಳು, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಚರ್ಚೆಯಾಗಬೇಕಿದೆ. ಸೂಕ್ಷ್ಮವಾಗಿ ಎಲ್ಲವನ್ನೂ ಅಳೆದು, ತೂಗಿ, ವಿಚಾರ ಮಾಡಿ ಮತ ಚಲಾಯಿಸದಿದ್ದರೆ, ಅಪಾಯ ಕಾಯ್ದಿದೆ. ನಿಮ್ಮ ಬದುಕು ಹಸನಾಗಬೇಕಿದ್ದರೆ, ಮಕ್ಕಳ ಭವಿಷ್ಯ ಉಜ್ವಲವಾಗಬೇಕಿದ್ದರೆ ಕಾಂಗ್ರೆಸ್ ಗೆಲ್ಲಿಸಬೇಕಿದೆ’ ಎಂದು ತಿಳಿಸಿದರು.

ಜಯಣ್ಣ ಸಂಗನಗೌಡ್ರ, ಸುಲೇಮಾನ ಅವಲ್ಯಾನವರ, ಬಸಪ್ಪ ಹರವಿ ಸೇರಿದಂತೆ ಇನ್ನೂ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಕಲವೀರಪ್ಪ ಪವಾಡಿ, ಈರಣ್ಣ ಬೂದಿಹಾಳ, ಚಮನಸಾಬ ಪಠಾಣ, ಎಂ.ಎನ್. ನೆಗಳೂರ, ಭಾಷಾಸಾಬ ಗೌಂಡಿ, ಸುಲೇಮಾನ ಸವಣೂರ, ಸುರೇಶ ಮಾಚಾಪೂರ, ಅಬ್ದುಲ್‍ಗನಿ ಪಟೇಲ, ಫಕ್ಕಿರೇಶ ಮಾವಿನಮರದ, ಪ್ರವೀಣ ಸಂತಣ್ಣನವರ, ಯಲ್ಲಪ್ಪ ನಿಂಬಣ್ಣನವರ, ಸುರೇಶ ಸೊಪ್ಪಿನ, ಶಾಂತಪ್ಪ ಶೀಲವಂತರ ಇದ್ದರು.

ನರೇಗಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಇದ್ದರು
ನರೇಗಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT