ಶಿಗ್ಗಾವಿ: ಮಳೆಯ ವಿಳಂಬದಿಂದ ಭಯಭೀತರಾದ ರೈತ ಸಮೂಹ ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಭಾನುವಾರ ಕತ್ತೆಗಳ ಮದುವೆ ಸಮಾರಂಭವನ್ನು ಸಕಲ ಸಂಪ್ರದಾಯದಂತೆ ಇಡೀ ರೈತ ಸಮೂಹ ಸಂಭ್ರಮದಿಂದ ಆಚರಿಸಿದರು.
ಅರಳೆಲೆಮಠದ ಸುತ್ತಲು ಮಾವಿನ, ಬಾಳೆ ಗಿಡಗಳಿಂದ ಅಲಂಕರಿಸಲಾಗಿತ್ತು. ರೈತರು, ಕತ್ತೆಗಳಿಗೆ ಕಂಕಣ ಸೌಭಾಗ್ಯ ಕಲ್ಪಿಸುವ ಮುನ್ನ, ಸಂಪ್ರದಾಯದಂತೆ ನಾಲ್ಕು ದಿಕ್ಕಿನಲ್ಲಿ ತೆಂಬಿಗೆಗಳನ್ನು ಇಟ್ಟು ಹತ್ತು ಸುತ್ತಿನ ನುಲಿನ ದಾರ ಹಾಕಲಾಯಿತು. ಕತ್ತೆಗಳಿಗೆ(ವಧುವರನಿಗೆ)ಮದುವಿಗೆ ಬಂದಿರುವ ಜನರಿಗೆ ಅರಿಸಿಣವನ್ನು ಹಚ್ಚಲಾಯಿತು. ಐದು ಕೊಡಗಳಿಂದ ಬಲ ಬದಿಯಿಂದ ಸೂರಿಗೆ ನೀರು ಹಾಕುವ ಸಂಪ್ರದಾಯ ಆಚರಿಸಲಾಯಿತು.
ಎರಡು ಕತ್ತೆಗಳಿಗೆ ಹೊಸ ಬಟ್ಟೆಗಳನ್ನು ಹಾಕಿ ಹೂಮಾಲೆಗಳಿಂದ ಶೃಂಗಾರ ಮಾಡಿದರು. ನಂತರ ಅರ್ಚಕರು, ಮಂತ್ರೋಪದೇಶ ನೆರವೇರಿಸಿದ ಬಳಕ ಎರಡು (ಹೆಣ್ಣು-ಗಂಡು)ಕತ್ತೆಗಳ ಮದುವೆ ಮಾಂಗಲ್ಯಧಾರಣೆ ಮಾಡುವ ಜೊತೆಗೆ ಅಕ್ಕಿ ಕಾಳು ಹಾಕುವ ಸಂಪ್ರದಾಯ ನಡೆಯಿತು. ಈ ಮದುವೆ ದಿಬ್ಬಣದಲ್ಲಿ ಸುಮಂಗಲೆಯರು, ಮದುವೆ ಸಂಭ್ರಮಕ್ಕೆ ನೆರವೇರಿಸುವ ಸಂಪ್ರದಾಯಗಳನ್ನು ಈ ಕತ್ತೆಗಳ ಮದುವೆಯಲ್ಲೂ ನೆರವೇರಿಸಿ ಸಂಭ್ರಮಿಸಿದರು. ಹೆಣ್ಣು ಕತ್ತೆ ತಲೆಗೆ ಹೂವಿನ ದಂಡಿ ಹಾಕಿದರೆ, ಗಂಡು ಕತ್ತೆ ಹಣೆಗೆ ಬಾಸಿಂಗ್ ಕಟ್ಟಿ ಕತ್ತೆಗಳಿಗೆ ಮದುವೆ ಕಾರ್ಯ ಮಾಡಿದರು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ನಡೆಯಿತು. ಪ್ರತಿ ಬೀದಿಗಳಲ್ಲಿ ನೂತನ ವಧುವರ ಕತ್ತೆಗಳಿಗೆ ನೀರು ಹಾಕಿ, ಆರತಿ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುವ ದೃಶ್ಯ ಕಂಡು ಬಂದಿತು. ನಂತರ ಕೇಸರಿಬಾತ್ ಅನ್ನ ಸಾರು ಸೇರಿದಂತೆ ವಿವಿಧ ಪದಾರ್ಥ ಭೋಜನ
ಕೂಟ ನೆರವೇರಿತು.
ರೈತ ಮುಖಂಡರಾದ ಚನ್ನಪ್ಪ ಶಿಗ್ಗಾವಿ, ರಾಮಣ್ಣ ವಳಗೇರಿ, ವೀರಪ್ಪ ಕೋತಂಬ್ರಿ, ಪ್ರಕಾಶ ಸಕ್ರಿ, ಬಾಪುಗೌಡ್ರ ಪಾಟೀಲ, ಬಸವರಾಜ ನಾರಾಯಣಪುರ, ಯಲ್ಲಪ್ಪ ಸಿಂಗಾಪುರ, ರವಿ ನರೆಗಲ್, ಅಂದಾನಗೌಡ ಪಾಟೀಲ, ಮಹಾದೇವಪ್ಪ ಉಂಕಿ, ಶಂಭಣ್ಣ ವಳಗೇರಿ, ರುದ್ರಪ್ಪ ಹುಗಾರ, ಕುಮಾರ ಉಂಕಿ, ದೇವಕ್ಕಾ ಕಟ್ಟಿಮನಿ, ಪುಷ್ಪಲತಾ ಉಂಕಿ, ಜ್ಯೋತಿ ಉಂಕಿ, ಶಿಲ್ಪಾ, ಲಲಿತಾ ಏಳಮಗ್ಗದ, ಸಾವಿತ್ರಿ ಕೋತಂಬ್ರಿ ಸೇರಿದಂತೆ ನೂರಾರು ಸಂಖ್ಯೆ ರೈತರು ಕತ್ತೆ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಮಳೆ ವಿಳಂಬವಾದಾಗ ಪರಂಪರಾಗತವಾಗಿ ಆಚರಣೆಯಲ್ಲಿರುವ ಕತ್ತೆ ಮದುವೆಗಳನ್ನು ಮಾಡುವ ಸಂಪ್ರದಾಯ ಇಂದಿಗೂ ಆಚರಿಸುತ್ತಾ ಬರಲಾಗಿದೆ. ಹೀಗಾಗಿ ಅದೇ ನಂಬಿಕೆಯಲ್ಲಿ ರೈತ ಸಮೂಹ ಸೇರಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ ನೆರವೇರಿಸಲಾಯಿತು
- ರಾಮಣ್ಣ ವಳಗೇರಿ,ರೈತ, ಬಂಕಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.