ಹಾವೇರಿ: ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲುಗಳು ಸಾವಿನ ಸರಣಿ ಮುಂದುವರೆದಿದ್ದು, ವಿಷ ಆಹಾರ ಸೇವಿಸಿ ಮತ್ತೆ ಐದು ನವಿಲುಗಳು ಸಾವನ್ನಪ್ಪಿದ ಘಟನೆ ಬುಧವಾರ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಜಮೀನಿನಲ್ಲಿ ಬಿತ್ತನೆ ಮಾಡಿದ ಬೀಜಗಳನ್ನು ಇಲಿ, ಹೆಗ್ಗಣ ಹಾಗೂ ವಿವಿಧ ರೀತಿಯ ಪಕ್ಷಿಗಳಿಂದ ರಕ್ಷಿಸಲು ರೈತರು, ಬಿತ್ತನೆ ಸಂದರ್ಭದಲ್ಲಿ ಗೋವಿನ ಜೋಳ ಬೀಜದ ಜತೆ ಕ್ರಿಮಿನಾಶಕ ಮಿಶ್ರಣ ಮಾಡಿ ಬಿತ್ತನೆ ಮಾಡಿರುತ್ತಾರೆ. ಅಂತಹ ಬೀಜವನ್ನು ಸೇವಿಸಿ ನವಿಲುಗಳು ಸಾವಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.
ಪಕ್ಷಿಗಳ ಮರಣೋತ್ತರ ಪರೀಕ್ಷಾ ವರದಿ ಕಾರಣವನ್ನು ಸ್ಪಷ್ಟಪಡಿಸಲಿದೆ ಎಂದು ಡಿಎಫ್ಒ ಎನ್.ಎಸ್. ರಾಘವೇಂದ್ರರಾವ್ ತಿಳಿಸಿದರು.
ಪಶುವೈದ್ಯಾಧಿಕಾರಿ ಡಾ.ಎಚ್.ವಿ. ಸಣ್ಣಕ್ಕಿ ಮರಣೋತ್ತರ ಪರೀಕ್ಷೆ ನಡೆಸಿದರು. ಇತ್ತೀಚಿಗೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ನವಿಲು ಧಾಮದಲ್ಲಿ ಇದೇ ರೀತಿ ವಿಷ ಆಹಾರ ಸೇವಿಸಿ ಎಂಟು ನವಿಲುಗಳು ಸಾವನ್ನಪ್ಪಿದ್ದವು.