ಬಾಗಲಕೋಟೆ: ‘ಮುರುಗೇಶ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿಲ್ಲದಿದ್ದರೆ ರಾಜೀನಾಮೆ ನೀಡಲಿ‘ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಬಾದಾಮಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ನಿರಾಣಿ ಸಿ.ಎಂ ಆಗುತ್ತಾರೆ ಎಂದು ಹೇಳಿಬಿಟ್ಟರು. ಎಲ್ಲಾ ಬೈಯ್ಯಲು ಶುರುಮಾಡಿದ ಮೇಲೆ ನಾನು ಹಂಗೆ ಹೇಳಲಿಲ್ಲ, ಮುಂದೆ ಆಗ ಬಹುದು ಅಂದರು. ಈಶ್ವರಪ್ಪನಿಗೆ ಸ್ವಾಭಿಮಾನ ಇದೆಯಾ?’ ಎಂದು ಪ್ರಶ್ನಿಸಿದರು.
‘ಎಸ್.ಆರ್.ಪಾಟೀಲಗೆ ಟಿಕೆಟ್ ನಿರಾಕರಿಸಿಲ್ಲ‘: ವಿಧಾನಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿಲ್ಲ. ದ್ವಿಸದಸ್ಯ ಕ್ಷೇತ್ರದಿಂದ ಪಕ್ಷದಿಂದ ಇಬ್ಬರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿತ್ತು. ಒಬ್ಬರಿಗೆ ಟಿಕೆಟ್ ನೀಡಿದರೆ ಮಾತ್ರ ಸ್ಪರ್ಧಿಸುವೆ ಎಂದು ಎಸ್.ಆರ್.ಪಾಟೀಲ ಹೇಳಿದ್ದರು. ಇಬ್ಬರಿಗೆ ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್ ನಿರ್ಧಾರ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.