ಆಳಂದ: ಕರ್ತವ್ಯಲೋಪ ಮತ್ತು ಹಣಕಾಸಿನ ದುರಪಯೋಗ ಹಿನ್ನಲೆ ತಾಲ್ಲೂಕಿನ ನಿಂಬಾಳ ಗ್ರಾಮ ಪಂಚಾಯಿತಿ ಸದಸ್ಯೆ ಯಲ್ಲಾಬಾಯಿ ಮಲ್ಕಣ್ಣ ಹಾವಳೇಕರ್ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ಇವರು ಮುಂದಿನ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶ ನೀಡಿದ್ದಾರೆ.
ಯಲ್ಲಾಬಾಯಿ ಅವರು ಗ್ರಾ.ಪಂ. ಅಧ್ಯಕ್ಷೆಯಾಗಿದ್ದಾಗ ₹ 25 ಸಾವಿರ ಚೆಕ್ನ್ನು ಅವರ ಪತಿ ಮಲ್ಕಣ್ಣ ಹೆಸರಿನಲ್ಲಿ ಪಡೆದಿದ್ದರು. ಇದನ್ನು ಪ್ರಶ್ನಿಸಿದ್ದ ಗ್ರಾಮದ ರಾಜಕುಮಾರ ಘೂಳ ಎಂಬುವವರು 2022ರ ಜನವರಿ 18ರಂದು ಆಳಂದ ತಾ.ಪಂ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದರು.
ಈ ಸಂಬಂಧ 2022ರ ಮಾರ್ಚ್ 3ರಂದು ಪ್ರಾದೇಶಿಕ ಆಯುಕ್ತರು ಯಲ್ಲಾಬಾಯಿ ಹಾವಳೇಕರ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.
ಸುದೀರ್ಘ ವಿಚಾರಣೆ ಬಳಿಕ ಅರೆ ನ್ಯಾಯಿಕ ನ್ಯಾಯಾಲಯ ಯಲ್ಲಬಾಯಿ ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)(ವಿ)ನ್ನು ಉಲ್ಲಂಘಿಸಿದ್ದಾರೆ ಎಂದು ಅಭಿಪ್ರಾಯಪಟ್ಟು, ಅವರು ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿದೆ.