ಕಮಲಾಪುರ: ‘ಅವಘಡ, ಅಪಘಾತ, ಅನಾರೋಗ್ಯ, ಪ್ರಸವ ಮತ್ತಿತರ ಆಪತ್ಕಾಲದಲ್ಲಿ ತುರ್ತು ಸೇವೆ ಒದಗಿಸಬೇಕಾದ 108 ಆಂಬುಲೆನ್ಸ್ ಕಳೆದ 15 ದಿನಗಳಿಂದ ಕೆಟ್ಟು ನಿಂತಿದ್ದು, ಜನರ ಜೀವ ನುಂಗುತ್ತಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತವೆ. ವಾರದಲ್ಲಿ ಎರಡಾದರೂ ಭೀಕರ ಅಪಘಾತಗಳಾಗುತ್ತಿವೆ. ಪ್ರಯಾಣಿಕರು, ಬೈಕ್ ಸವಾರರು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಅವರಿಗೆ ಶೀಘ್ರದಲ್ಲಿ ಆಸ್ಪತ್ರೆಗೆ ಸೇರಿಸಲು ತುರ್ತುಸೇವೆ ಒದಗಿಸುವ ಆಂಬುಲೆನ್ಸ್ ಸಿಗುತ್ತಿಲ್ಲ. 108ಗೆ ಕರೆ ಮಾಡಿದರೆ ಕಮಲಾಪುರದಲ್ಲಿ ಆಂಬುಲೆನ್ಸ್ ಇಲ್ಲ ಬೇರೆಡೆಯಿಂದ ಕಳುಹಿಸಬೇಕಾಗುತ್ತದೆ. ಒಂದು ಗಂಟೆಯಾಗುತ್ತದೆ, ಎರಡು ಗಂಟೆಯಾಗುತ್ತದೆ ಎಂದು ಹೆಳುತ್ತಾರೆ.
ಹೆದ್ದಾರಿ ಬದಿಗೆ ಅವರಾದ (ಬಿ) ಬಿಟ್ಟರೆ ಕಮಲಾಪುರದಲ್ಲಿ 108 ಆಂಬುಲೆನ್ಸ್ ವ್ಯವಸ್ಥೆಯಿದೆ. ಸುಮಾರು 25 ಕಿ.ಮೀ ಅಂತರವಿದೆ. ಈ ಅಂತರದಲ್ಲಿ ಹೆದ್ದಾರಿ ಮೇಲೆ ಇತ್ತೀಚಿಗೆ ಅತಿಹೆಚ್ಚು ಅಪಘಾತಗಳಾಗುತ್ತಿವೆ. 108ಗೆ ಕರೆಮಾಡಿ ಕಾದು ಸುಸ್ತಾಗಿ ಖಾಸಗಿ ವಾಹನಗಳಲ್ಲಿ ಕಳುಹಿಸಲಾಗುತ್ತಿದೆ. ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರದ ಕಾರಣ ಗಾಯಾಳುಗಳು ಮಾರ್ಗ ಮಧ್ಯದಲ್ಲೇ ಅಸುನೀಗುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾರು ಪಲ್ಟಿಯಾಗಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಶನಿವಾರ ಬೈಕ್ ಸವಾರನಿಗೆ ಕಾರು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ. ಭಾನುವಾರ ಕಾರ್ಮಿಕರ ಹೊತ್ತೊಯ್ಯುತ್ತಿದ ಟೆಂಪೋ ಪಲ್ಟಿಯಾಗಿ ಒಬ್ಬರು ಮೃತಪಟ್ಟು ಸುಮಾರು 8 ಜನ ಗಾಯಗೊಂಡಿದ್ದರು. ಈ ಎಲ್ಲ ಘಟನೆಗಳಲ್ಲಿ ಜನ ಆಂಬುಲೆನ್ಸ್ಗೆ ಕರೆ ಮಾಡಿದ್ದು ಕಮಲಾಪುರದಲ್ಲಿ ಆಂಬುಲೆನ್ಸ್ ಇಲ್ಲ ಬೇರೆಡೆಯಿಂದ ಕಳುಹಿಸುತ್ತೇವೆ ಎಂದು ಗಂಟೆಗಟ್ಟಲೆ ಕಾಯಿಸಿದ್ದು, ಬೇಸತ್ತು ಜನ ಖಾಸಗಿ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇಷ್ಟಾದರೂ ಇನ್ನೂ ಆಂಬುಲೆನ್ಸ್ ದುರಸ್ತಿಗೊಳಿಸಿಲ್ಲ. ದುರಸ್ತಿಯಾಗದಿದ್ದರೆ ಬೇರೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಏಜೆನ್ಸಿಯವರು ಖಾಸಗಿಯವರಿಂದ ಪಡೆದು ಸೂಕ್ತ ಸೇವೆ ಒದಗಿಸಬೇಕು. ತಾಲ್ಲೂಕು, ಜಿಲ್ಲಾ ಆರೋಗ್ಯಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದ್ಯಾವುದನ್ನು ಮಾಡದೆ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವ ಆಂಬುಲೆನ್ಸ್ ಏಜೆನ್ಸಿ ಹಾಗೂ ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಂಬುಲೆನ್ಸ್ ದುರಸ್ತಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಸದ್ಯ ಅಂಬಲಗಾದ 108 ಆಂಬುಲೆನ್ಸ್ ಕಮಲಾಪುರಕ್ಕೆ ವರ್ಗಾಯಿಸಲಾಗುವುದುಡಾ.ರತಿಕಾಂತ ಸ್ವಾಮಿ ಡಿಎಚ್ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.