ಅಫಜಲಪುರ: 'ವಿವಿಧ ಕಾಯಿಲೆಗಳ ಔಷಧಿಗಳಿಗೆ ಬೇಕಾಗುವ ಗಿಡ, ಮರ, ಬಳ್ಳಿಗಳನ್ನು ಬೆಳೆಸುವ ಮೂಲಕ ಇಡೀ ಆಸ್ಪತ್ರೆಯ ವಾತಾವರಣವನ್ನು ಬದಲಾವಣೆ ಮಾಡಿದ್ದು ಆಯುರ್ವೇದಿಕ ಆಸ್ಪತ್ರೆ ಪರಿಸರ ಸ್ನೇಹಿ ಆಗಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಗಿರಿಜಾ ವಾಯ್.ಎಸ್ ತಿಳಿಸಿದರು.
ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸರ್ಕಾರಿ ಆಯುರ್ವೇದಿಕ ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಯಾವುದೇ ಕಾಯಿಲೆಯನ್ನು ಆಯುರ್ವೇದಿಕ ಔಷಧಿಯಿಂದ ಗುಣಪಡಿಸಬಹುದು. ಆದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬರು ಯೋಗಾ ಮಾಡುವುದನ್ನು ರೂಢಿಸಿಕೊಳ್ಳಬೇಕು ಇದರಿಂದ ಯಾವುದೇ ಕಾಯಿಲೆಗಳು ಹತ್ತಿರ ಬರುವುದಿಲ್ಲ ಮನಸ್ಸು ಶಾಂತವಾಗಿರುತ್ತದೆ ಎಂದರು.
ಡಾ. ಶ್ರೀಶೈಲ್ ಪಾಟೀಲ್, ‘ಆಸ್ಪತ್ರೆಯ ಸುತ್ತಮುತ್ತಲು ಔಷಧೀಯ ಗಿಡಗಳನ್ನು ನೆಡಲಾಗಿದೆ. ನಿತ್ಯ ಯೋಗವನ್ನು ನಡೆಸಲಾಗುತ್ತದೆ, ನಮ್ಮದೇ ಗ್ರಾಮದಲ್ಲಿ ಈಗಾಗಲೇ ಹಲವಾರು ಬಾರಿ ಆಯುರ್ವೇದಿಕ ಔಷಧ ಕುರಿತು ಜನರಿಗೆ ಜಾಗೃತಿ ಶಿಬಿರಗಳನ್ನು ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.
ತರಬೇತುದಾರರಾದ ಮಹೇಶ್ ಚಳಗೇರಿ ಹಾಗೂ ಮುಖಂಡರಾದ ತಾ.ಪಂಮಾಜಿ ಅಧ್ಯಕ್ಷ ಮಹಾಂತಯ್ಯ ಮಠಪತಿ, ವಿಜಯಕುಮಾರ್ ಪಾಟೀಲ್ ಇದ್ದರು.