ಅಫಜಲಪುರ: ‘ಮನುಷ್ಯ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದರೂ, ತನ್ನನ್ನು ತಾನು ಅರಿತು ನಡೆದರೆ ಮಾತ್ರ ಬದುಕು ಸುಗಮವಾಗುತ್ತದೆ’ ಎಂದು ಅಭಿನವ ಗುರುಬಸವ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಅತನೂರ ಗ್ರಾಮದ ನಂದಿ ಬಸವೇಶ್ವರ ಜಾತ್ರ ಮಹೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ‘ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ತೃಪ್ತಿದಾಯಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಶರಣರ, ಸಂತರ ಸತ್ಸಂಗದಿಂದ ಆತ್ಮಕಲ್ಯಾಣವಾಗುತ್ತದೆ. ಸ್ವಾರ್ಥ ರಹಿತ ಕಾಯಕದಿಂದ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಅಧುನಿಕ ಯುಗದ ಭರಾಟೆಯಲ್ಲಿ ಸಿಲುಕಿರುವ ಮನುಷ್ಯನು ಆಡಂಬರದ ಜೀವನ ಶೈಲಿಯಿಂದ ದೂರಾಗಿ ಆಧ್ಯಾತ್ಮಿಕತೆಯಕಡೆಗೆ ಬರಬೇಕು. ಧಾರ್ಮಿಕ ಕಾರ್ಯಗಳಿಂದ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯವಾಗುತ್ತದೆ. ತಂದೆ–ತಾಯಿ ಮಕ್ಕಳಿಗಾಗಿ ಆಸ್ತಿ ಮಾಡದೇ ಸಂಸ್ಕಾರಯುತ ಶಿಕ್ಷಣ ನೀಡಿ ದೇಶಕ್ಕೆ ಉತ್ತಮ ನಾಗರಿಕರನ್ನಾಗಿ ಮಾಡಬೇಕು’ ಎಂದು ಹೇಳಿದರು.
ಮೇ 10ರಂದು ಶನಿವಾರ ಬೆಳಿಗ್ಗೆ 8ಕ್ಕೆ ನಂದಿ ಬಸವೇಶ್ವರರಿಗೆ ರುದ್ರಾಭಿಶೇಕ, ಮಹಾಪುಜೆ, ಕಳಸಾರೋಹಣ, ಜಗಜ್ಯೋತಿ ಬಸವೇಶ್ವರರ ಷಟಸ್ಥಲ ಧ್ವಜಾರೋಹಣ, ಗ್ರಾಮದಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಯುವುದು. ಬೆಳಿಗ್ಗೆ 11 ಗಂಟೆಗೆ ನಂದಿ ಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುವುದು, ಸಂಜೆ ರಥೋತ್ಸವ ನಡೆಯಲಿದೆ.