ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ– ಕೋರೇಗಾಂವ ವಿಜಯೋತ್ಸವ; ಮೆರವಣಿಗೆ

Last Updated 2 ಜನವರಿ 2021, 11:54 IST
ಅಕ್ಷರ ಗಾತ್ರ

ಕಲಬುರ್ಗಿ:ಭೀಮಾ ಕೋರೇಗಾಂವ್‌ ವಿಜಯೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಮೆರವಣಿಗೆ ನಡೆಸಲಾಯಿತು. ಇಲ್ಲಿನ ಜಗತ್‌ ವೃತ್ತದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗಣ್ಯರು, ಉತ್ಸವಕ್ಕೆ ಚಾಲನೆ ನೀಡಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೂ ನಡೆದ ಮೆರವಣಿಗೆಯಲ್ಲಿ ದಲಿತ ಸಂಘಟನೆಯ ನೂರಾರು ಕಾರ್ಯಕರ್ಯರ್ತರು, ಮುಖಂಡರು ಪಾಲ್ಗೊಂಡರು.

ಉತ್ಸವದ ಅಂಗವಾಗಿ ಸಂಜೆ ನಡೆದ ‘ದಲಿತರ ಸ್ವಾಭಿಮಾನ ಜಾಗೃತಿ ದಿನ’ ಸಮಾವೇಶದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಬಿ.ಜಿ.ಸಾಗರ ಅವರು ಕೋರೇಗಾಂವ ವಿಜಯೋತ್ಸವದ ಹಿರಿಮೆ ಬಿಚ್ಚಿಟ್ಟರು.

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ‘ಮನೆಯಲ್ಲಿ ನಮಗೆ ತಂದೆ– ತಾಯಿ ಇರುವ ಹಾಗೆ; ಅಂಬೇಡ್ಕರ್‌ ಅವರು ಈ ದೇಶದ ತಂದೆ– ತಾಯಿ ಇದ್ದ ಹಾಗೆ. ಅವರು ನೀಡಿದ ಸಂವಿಧಾನದಿಂದಲೇ ನನ್ನಂಥ ಪರಿಶಿಷ್ಟ ಸಮುದಾಯದವರೂ ಇಂದು ವಿಧಾನಸಭೆಯಲ್ಲಿ ಕುಳಿತುಕೊಳ್ಳುವಂತಾಗಿದೆ’ ಎಂದರು.

ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ನಮ್ಮನ್ನು ಉದ್ಧಾರ ಮಾಡಲು ಅಂಬೇಡ್ಕರ್‌, ಬಸವಣ್ಣನಂಥವರು ಮತ್ತೆ ಹುಟ್ಟಿ ಬರುವುದಿಲ್ಲ. ಹಾಗಾಗಿಯೇ ಅವರು ನಮಗಾಗಿ ಬರೆದು ಹೋದದ್ದು ಸಾಕಷ್ಟಿದೆ. ಅದನ್ನು ಓದುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಘಾನಂದ ಭಂತೇಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಸುರೇಶ ಹಾದಿಮನಿ, ಉಮೇಶ ನರೋಣ, ಕೃಷ್ಣಪ್ಪ ಕರಣಿಕ, ರೇವಣಸಿದ್ಧಪ್ಪ ಜಾಲಿ, ಮಲ್ಲಣ್ಣ ಕೊಡಚಿ ಮುಂತಾದ ಮುಖಂಡರು ವೇದಿಕೆ ಮೇಲಿದ್ದರು.

ಶಹಾಬಾದ್‌ ಪೌರಾಯುಕ್ತ ಕೆ.ಗುರುಲಿಂಗಪ್ಪ,ಸಂಚಾರ ಠಾಣೆ ಪಿಎಸ್‌ಐ ಭಾರತಿಬಾಯಿ ಧನ್ನಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT