ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ| ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಾಳೆ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ
Published 15 ಮೇ 2024, 15:53 IST
Last Updated 15 ಮೇ 2024, 15:53 IST
ಅಕ್ಷರ ಗಾತ್ರ

ಕಲಬುರಗಿ:‘ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಗುರುವಾರ (ಮೇ 16) ಬೆಳಿಗ್ಗೆ 10.30 ಗಂಟೆಗೆ ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಗುವುದು’ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ನಾಮಪತ್ರ ಸಲ್ಲಿಕೆ ನಂತರ, ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯ, ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘1986ರಿಂದ ಕಳೆದ ಹಲವು ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಪದವೀಧರ ಕ್ಷೇತ್ರ ಬೇರೆ ಜಿಲ್ಲೆಯವರಿಗೆ ಟಿಕೆಟ್‌ ನೀಡಿದ್ದರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಹೈಕಮಾಂಡ್‌ ಈ ಬಾರಿ ಮತ್ತೆ ಕಲಬುರಗಿ ಭಾಗದವರಿಗೆ ಟಿಕೆಟ್ ನೀಡಿದೆ’ ಎಂದು ಹೇಳಿದರು.

ಸದನದಲ್ಲಿ ಕಲ್ಯಾಣ ವಿಷಯ ಪ್ರಸ್ತಾಪ: ‘2012ರಿಂದ 18ರ ಅವಧಿಗೆ ಪರಿಷತ್ ಸದಸ್ಯನಾಗಿ ಆಯ್ಕೆಯಾದ ನಂತರ ಕಲ್ಯಾಣ ಕರ್ನಾಟಕ ಭಾಗದ ಅನೇಕ ಸಮಸ್ಯೆಗಳು, ಪದವೀಧರರ ಕುರಿತು ಸದನದಲ್ಲಿ ಗಮನ ಸೆಳೆದಿದ್ದೇನೆ. ಸರ್ಕಾರ ಯಾವುದೇ ಇದ್ದರೂ ನಮ್ಮ ಹಕ್ಕು ಪಡೆಯುಲು ಪ್ರಶ್ನೆ ಮಾಡಿದ್ದೇನೆ. ಪದವೀಧರರ ಧ್ವನಿಯಾಗಿ ಕೆಲಸವನ್ನು ಮಾಡಿದ್ದೇನೆ. ಆದರೆ, ಹಿಂದೆ ಆಯ್ಕೆಯಾದ ಪರಿಷತ್ ಸದಸ್ಯರು ಯಾವುದೇ ಗಮನ ಸೆಳೆಯುವ ಪ್ರಯತ್ನ ಮಾಡಿಲ್ಲ’ ಎಂದು ದೂರಿದರು.

‘ಜೆಡಿಎಸ್‌ ಪಕ್ಷದ ಒಗ್ಗಟ್ಟಿನೊಂದಿಗೆ ಚುನಾವಣೆ ಮಾಡಲಾಗುವುದು. ಬಿಜೆಪಿ–ಜೆಡಿಎಸ್ ಮೈತ್ರಿಯಾಗಿರುವುದರಿಂದ ನಮಗೆ ಅನುಕೂಲವಾಗಲಿದೆ. ಇದರಿಂದ ನಾವು ಜಯ ಸಾಧಿಸಲಿದ್ದೇವೆ. ಈಶಾನ್ಯ ಪದವೀಧರ ಕ್ಷೇತ್ರ 7 ಜಿಲ್ಲೆಗಳ 41 ವಿಧಾನಸಭೆ ವ್ಯಾಪ್ತಿ ಹೊಂದಿದೆ. ಚುನಾವಣೆಗೆ ಕಡಿಮೆ ಸಮಯ ಇರುವುದರಿಂದ ಆ ಅವಧಿಯಲ್ಲಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ, ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಸಿದ್ದಾಜಿ ಪಾಟೀಲ, ಹರ್ಷವರ್ಧನ ಮುಗಳೆ, ಗಂಗಪ್ಪಗೌಡ ಪಾಟೀಲ, ಸಂತೋಷ ಹಾದಿಮನಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT