ಕಲಬುರ್ಗಿ: ‘ಸಜ್ಜನಿಕೆ, ಔದಾರ್ಯ, ಶಾಂತ ಮತ್ತು ಸೌಮ್ಯ ಪ್ರಭಾವದ ಸಾಕಾರಮೂರ್ತಿ ಆಗಿದ್ದ ದೇವಲ ಮಹರ್ಷಿ ಅವರ ಕುರಿತಾದ ಈ ಕೃತಿಯು ಚಾರಿತ್ರಿಕ ಕಥೆಗಳನ್ನು ಹೊಂದಿದೆ’ ಎಂದು ಹಿರಿಯ ಲೇಖಕ ಸೂರ್ಯಕಾಂತ ಸೊನ್ನದ ಅಭಿಪ್ರಾಯಪಟ್ಟರು.
ಕಲಬುರ್ಗಿಯಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ದೇವಾಂಗ ಅಭಿವೃದ್ಧಿ ಸಂಘದಿಂದ ಶುಕ್ರವಾರ ಆಯೋಜಿಸಿದ್ದಚಂದ್ರಶೇಖರ ಮಾಳಾ ಅವರು ರಚಿಸಿದ ‘ದೇವಮಾನವ ಶ್ರೀ ದೇವಲ ಮಹರ್ಷಿ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
‘ಪೌರಾಣಿಕ ಕಥಾರೂಪದಲ್ಲಿ ರಚಿಸಲಾದ ದೇವಲ ಮಹರ್ಷಿ ಕೃತಿಯು ಚರಿತ್ರೆಯ ಜೊತೆಗೆ ಸುಮಾರು 40 ಕವಿತೆಗಳು ಅಡಗಿವೆ. ದೇವಾಂಗ ಸಮಾಜ ಸ್ಥಾಪನೆಯಾದ ಕಾರ್ತಿಕ ಮಾಸದ ದ್ವಾದಶಿ ದಿನದಂದು ದೇವಲ ಮಹರ್ಷಿ ಜಯಂತ್ಯುತ್ಸವವನ್ನು ಸಮಾಜದವರು ಆಚರಿಸುತ್ತ ಬಂದಿದ್ದಾರೆ’ ಎಂದು ಅವರು ತಿಳಿಸಿದರು.
‘ಮಾತಾ ಗಾಯತ್ರಿ ಪೀಠ ಹಂಪಿಯಲ್ಲಿ ಹೇಗೆ ಬಂತು? ಮೊದಲ ಪೀಠಾಧಿಪತಿ ಯಾರು? ಬಾದಾಮಿಯಲ್ಲಿ ಬನಶಂಕರಿ ದೇವಾಲಯ ಹೇಗೆ ಬಂತು? ತೆಂಗಿನ ಬನದ ನಿರ್ಮಾಣ ಏಕೆ ಆಯಿತು... ಇವೇ ಮುಂತಾದ ವಿವರಣೆಗಳು ಈ ಕೃತಿಯಲ್ಲಿ ಗಮನಾರ್ಹವಾಗಿ ಮೂಡಿಬಂದಿವೆ’ ಎಂದರು.
ಇದಕ್ಕೂ ಮುನ್ನ ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕ ಆರ್.ಸಿ.ಘಾಳೆ ಜ್ಯೋತಿ ಬೆಳಗಿಸಿ ಮಾತನಾಡಿದರು. ಅಕ್ಕಲಕೋಟ ಕೋಷ್ಟಿ ಸಮಾಜದ ಅಧ್ಯಕ್ಷೆ ಸುನಂದಾ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಿಶ್ವಕರ್ಮ ಏಕದಂಡಗಿ ಮಠಾಧೀಶರಾದ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಲೇಖಕ ಚಂದ್ರಶೇಖರ ಮಾಳಾ ಸ್ವಾಗತಿಸಿದರು. ವಿನೋದಕುಮಾರ ಜೆನೇವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾಹಿತಿ ರಮೇಶ ಮಾಳಾ ವಂದಿಸಿದರು. ವಿಜಯಕುಮಾರ ಜುಂಜಾ, ಶಿವಲಿಂಗಪ್ಪ ಹಳ್ಳಿ, ರಾಜು ಕೋಷ್ಟಿ ಇದ್ದರು.