ಕಲಬುರಗಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ವೇಳೆ ಯುವಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಕನಕದಾಸರ, ಸಂಗೊಳ್ಳಿ ರಾಯಣ್ಣರ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯ ಮಾರ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡರು. ಹಿರಿಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು ಎಂದು ಪ್ರತ್ಯೇಕ ದರ್ಶಿಯೊಬ್ಬರು ಹೇಳಿದರು.
ಮೆರವಣಿಗೆಯು ಡಾ.ಎಸ್. ಎಂ. ಪಂಡಿತ ರಂಗಮಂದಿರ ತಲುಪಿತು. ರಂಗ ಮಂದಿರದ ಒಳಗೆ ವೇದಿಕೆಯ ಕಾರ್ಯಕ್ರಮ ನಡೆಯುತ್ತಿದ್ದರೆ ರಂಗಮಂದಿರದ ಆವರಣದಲ್ಲಿ ಯುವಕರು ಹೊಡೆದಾಡಿಕೊಂಡರು. ಇಬ್ಬರಿಗೂ ಮುಖ, ತಲೆಗೆ ಗಾಯಗಳಾಗಿ ರಕ್ತಸ್ರಾವವಾಯಿತು.
ಇಬ್ಬರು ಗಾಯಾಳುಗಳನ್ನು ಕರೆಯಿಸಿ ಗಲಾಟೆಯ ಬಗ್ಗೆ ಸಮುದಾಯದ ಹಿರಿಯರು ವಿಚಾರಿಸುತ್ತಿದ್ದರು. ತನ್ನ ಮೇಲಾದ ಹಲ್ಲೆ, ಗಾಯಗಳ ಗುರುತು ತೋರಿಸುತ್ತಿದ್ದ ಗಾಯಗೊಂಡವನ ಮೇಲೆ ಗುಂಪಿನಲ್ಲಿ ಇದ್ದವರು ಮತ್ತೆ ಹಲ್ಲೆ ಮಾಡಿದರು. ತಕ್ಷಣವೇ ಪೊಲೀಸರು ಗಾಯಾಳುಗಳನ್ನು ಅಲ್ಲಿಂದ ಹೊರ ಕಳುಹಿಸಿದರು. ಗುಂಪು ಸೇರಿದವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಆಗ, ಯುವಕರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
ಗಾಯಾಳು ಒಬ್ಬ ನಗರ ಸಾರಿಗೆಯ ಬಸ್ ಹತ್ತಿ ಅಲ್ಲಿಂದ ಹೊರಡುತ್ತಿದ್ದರು. ಬಸ್ ಒಳಗೆ ನುಗ್ಗಿದ ಕೆಲವರು ಗಾಯಾಳು ಮೇಲೆ ಹಲ್ಲೆಗೆ ಯತ್ನಿಸಿದರು. ಸಿಗ್ನಲ್ ಬಳಿ ಬಸ್ ನಿಲ್ಲುತ್ತಿದ್ದಂತೆ ಗಾಯಾಳು ಕೆಳಗೆ ಇಳಿದು ಓಡಿ ಹೋದರು. ಕೆಲವರು ಕೂಗುತ್ತಾ ಗಾಯಾಳು ಹಿಂದೆಯೇ ಓಡಿ ಹೋದರು. ಇತ್ತ ವೇದಿಕೆಯ ಮೇಲೆ ಜಯಂತಿ ಕಾರ್ಯಕ್ರಮ ನಡೆಯಿತು.