ಚಿಂಚೋಳಿ: ನಾಗರಾಳ ಜಲಾಶಯದಿಂದ ಮುಲ್ಲಾಮಾರಿ ನದಿಗೆ ನೀರು ಬಿಟ್ಟಿರುವುದರಿಂದ ಪ್ರವಾಹ ಉಂಟಾಗಿದೆ. ಇದರಿಂದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು ಎಂದು ಸಂಸದ ಡಾ. ಉಮೇಶ ಜಾಧವ ಸೂಚಿಸಿದರು.
ತಾಲ್ಲೂಕಿನ ಚಿಮ್ಮನಚೋಡ, ಕನಕಪುರ, ಚಿಂಚೋಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಅವರು ಜನರ ಅಹವಾಲು ಆಲಿಸಿದರು. ಮನೆಗಳಿಗೆ ನೀರು ನುಗ್ಗಿ ಅಗತ್ಯ ವಸ್ತುಗಳು ಹಾಳಾಗಿರುವುದನ್ನು ಖುದ್ದು ವೀಕ್ಷಿಸಿದರು.
ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿದ್ದರಿಂದ ಸಂಪರ್ಕ ಕಡಿತವಾದ ಬಗ್ಗೆ ಮಾಹಿತಿ ಪಡೆದ ಅವರು ವಿಸ್ತೃತ ವರದಿ ನೀಡುವಂತೆ ತಮ್ಮೊಂದಿಗಿದ್ದ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಕಳೆದ ವಾರ ಚಿಂಚೋಳಿ ಪಟ್ಟಣದ 43 ಮನೆಗಳಿಗೆ, ಗುರುವಾರ 89 ಮನೆಗಳು ಸೇರಿ ಒಟ್ಟು 128 ಮನೆಗಳಿಗೆ ನೀರು ನುಗ್ಗಿದೆ. 35 ಮನೆಗಳು ಮಳೆಯಿಂದ ಭಾಗಶಃ ಉರುಳಿವೆ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದರು.
ಪ್ರವಾಹದಿಂದ 31 ಹಳ್ಳಿ ಮತ್ತು 30 ತಾಂಡಾಗಳಿಗೆ ವಿದ್ಯುತ್ ಪೂರೈಸಲು ತೊಂದರೆಯಾಗಿದೆ. ಇವುಗಳನ್ನು ಸರಿ ಪಡಿಸುವ ಕೆಲಸ ನಡೆದಿದೆ ಎಂದು ಜೆಸ್ಕಾಂ ಎಇಇ ಉಮೇಶ ಗೋಲಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾ.ಪಂ. ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ, ಇಒ ಅನಿಲಕುಮಾರ ರಾಠೋಡ್, ಬಿಜೆಪಿ ಹಿರಿಯ ಮುಖಂಡ ಶರಣಪ್ಪ ತಳವಾರ, ಸತೀಶರೆಡ್ಡಿ, ಮಲ್ಲು ಕೂಡಾಂಬಲ್ ಇದ್ದರು.