ಕಲಬುರ್ಗಿ: ಮನೆಯವರು ಕೆಲಸಕ್ಕೆಂದು ಕೀಲಿ ಹಾಕಿಕೊಂಡು ಹೋಗಿದ್ದ ವೇಳೆ ಮನೆಯ ಕೀಲಿ ಮುರಿದು ₹ 1.03 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಐದನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ.
ಆಜಾದಪುರ ರಸ್ತೆಯ ಮಹ್ಮದ್ ಅಲ್ಮಾಸ್ ಅಲಿಯಾಸ್ ಮುರಗಿ ಚಾಂದ್ ಶಿಕ್ಷೆಗೊಳಗಾದವನು. 28 ಮೇ 2017ರಂದು ಸೈಯದ್ ಚಿಂಚೋಳಿ ಕ್ರಾಸ್ ಸಮೀಪದ ಸಾಗರ ಸಿಟಿಯಲ್ಲಿರುವ ಉದಯಕುಮಾರ ಮಠಪತಿ ಅವರ ಮನೆಗೆ ನುಗ್ಗಿದ್ದ ಮಹ್ಮದ್ ಅಲ್ಮಾಸ್ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ವಾಜಿದ್ ಪಟೇಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯಾಧೀಶರಾದ ಪಂಕಜಾ ಕೊಣ್ಣೂರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಸರ್ಕಾರದ ಪರವಾಗಿ 5ನೇ ಸಹಾಯಕ ಸರ್ಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.
ಮಹಿಳೆಯ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಜೈಲು
ಕಲಬುರ್ಗಿ: ಪಿಕ್ ಅಪ್ ಜೀಪ್ ಅನ್ನು ನಿರ್ಲಕ್ಷ್ಯದಿಂದ ಚಲಾಯಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿದ್ದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಯಲೋರಿ ಗ್ರಾಮದ ಪ್ರೇಮನಾಥ ಗಂಜಿಟೆ ಎಂಬಾತನಿಗೆ ಇಲ್ಲಿನ ಐದನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 4,700 ದಂಡ ವಿಧಿಸಿ ಆದೇಶಿಸಿದೆ.
5 ಡಿಸೆಂಬರ್ 2014ರಲ್ಲಿ ಪ್ರೇಮನಾಥ ಹುಮನಾಬಾದ್ ಕಡೆಯಿಂದ ನಗರಕ್ಕೆ ಬರುವಾಗ ರಸ್ತೆ ಬದಿ ನಿಂತಿದ್ದ ಹೈದರಾಬಾದ್ ನಿವಾಸಿ ಅಲಿಯಾ ಬೇಗಂ ರಹಿಮೊದ್ದೀನ್ ಎಂಬುವವರಿಗೆ ಡಿಕ್ಕಿ ಹೊಡೆಸಿದ್ದ. ಅಲಿಯಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಡಿ.ಜಿ.ರಾಜಣ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಂಕಜಾ ಕೊಣ್ಣೂರ ಅವರು ಮೋಟಾರು ವಾಹನ ಕಾಯ್ದೆಯಡಿ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ದಂಡ ಪಾವತಿಸಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 1 ತಿಂಗಳು 10 ಜನ ಕಾರಾಗೃಹ ಶಿಕ್ಷೆಯನ್ನು ವಿಧಿಸಿದ್ದಾರೆ.
ಸರ್ಕಾರದ ಪರವಾಗಿ5ನೇ ಸಹಾಯಕ ಸರ್ಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.