ಆಳಂದ: ತಹಶೀಲ್ದಾರ್ ಕಚೇರಿಯಲ್ಲಿನ ಉಪ ತಹಶೀಲ್ದಾರ್ (ಗ್ರೇಡ್–2 ತಹಶೀಲ್ದಾರ್) ಒಬ್ಬರಿಗೆ ಶನಿವಾರ ಕೋವಿಡ್ 19 ಸೋಂಕು ಪತ್ತೆಯಾಗಿದೆ.
ಇವರು ಪ್ರಭಾರ ತಹಶೀಲ್ದಾರ್ ಆಗಿ ಕಳೆದ ವಾರದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ನೇರ ಸಂಪರ್ಕಕ್ಕೆ ಹಲವು ಜನ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ತಹಶೀಲ್ದಾರ್ ಕಚೇರಿಗೆ ಶನಿವಾರ ಪುರಸಭೆ ಸಿಬ್ಬಂದಿಯಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಎರಡು ದಿನ ರಜೆ ದಿನ ಇರುವ ಕಾರಣ ತಹಶೀಲ್ದಾರ್ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ಸಹಾಯವಾಣಿ ಸೇರಿದಂತೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಸಹ ಶನಿವಾರ ಕಂಡುಬರಲಿಲ್ಲ.
ಸರ್ಕಾರಿ ನೌಕರರ ಸಂಘದವರು ತಹಶೀಲ್ದಾರ್ ಕಚೇರಿಗೆ ಶುಕ್ರವಾರ ಆಗಮಿಸಿ ಮನವಿ ಸಲ್ಲಿಸಿದ್ದರು. ಹೀಗಾಗಿ ನೌಕರರ ಸಂಘದ ಅಧ್ಯಕ್ಷರು ಮತ್ತು ಇತರರು ಹೋಂ ಕ್ವಾರಂಟೈನ್ನಲ್ಲಿ ಉಳಿಯುವಂತಾಗಿದೆ.
ಈಗಾಗಲೇ ಪಟ್ಟಣದ ಹೋಟೆಲ್ ಮಾಲೀಕನೊಬ್ಬನಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಇವರ ಸಂಪರ್ಕಕ್ಕೆ ಬಂದಿರುವ ತಹಶೀಲ್ದಾರ್ ದಯಾನಂದ ಪಾಟೀಲ ಅವರು ಹೋಂ ಕ್ವಾರಂಟೈನ್ ಮುಗಿಸಿ ಶನಿವಾರ ಕಚೇರಿಗೆ ಹಾಜರಾಗಿದ್ದಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ ಸಹ ಹೋಂ ಕ್ವಾರಂಟೈನ್ನಲ್ಲಿದ್ದಾರೆ.