ಕಲಬುರ್ಗಿ: ‘ಕಲಬುರ್ಗಿ– ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಈಗಾಗಲೇ ₹ 10 ಕೋಟಿ ಶೇರು ಹಣ ನೀಡಲಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
‘ಡಿ.ಸಿ.ಸಿ. ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕ್ ಕೂಡ ₹ 200 ಕೋಟಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಕೆಲವು ಕಾರಣಗಳಿಂದ ಈ ಬ್ಯಾಂಕ್ ನಿಷ್ಕ್ರಿಯಗೊಂಡಿದೆ. ಕಲಬುರ್ಗಿಯೂ ಸೇರಿದಂತೆ ರಾಜ್ಯದ 21 ಡಿಸಿಸಿ ಬ್ಯಾಂಕುಗಳ ಪುನಶ್ಚೇತನಕ್ಕೆ ಸರ್ಕಾರದ ಬದ್ಧವಿದೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಣಾಮ ₹ 187 ಕೋಟಿ ಸಾಲ ವಸೂಲಿ ಮಾಡಲಾಗಿದೆ. ರಾಜ್ಯ ಸರ್ಕಾರ ಕೂಡ ₹ 300 ಕೋಟಿ ಹೆಚ್ಚುವರಿ ಸಾಲ ನೀಡುವ ಮೂಲಕ ಬ್ಯಾಂಕಿಗೆ ಆರ್ಥಿಕ ಬಲ ನೀಡಬೇಕು ಎಂಬ ಬೇಡಿಕೆ ಇದೆ. ಹಂತ ಹಂತವಾಗಿ ಹಣ ನೀಡಲಾಗುವುದು’ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘30 ಲಕ್ಷ ರೈತರಿಗೆ ಸಾಲ ನೀಡುವ ಗುರಿ’
‘ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದ 30 ಲಕ್ಷ ರೈತರಿಗೆ ಡಿಸಿಸಿ ಬ್ಯಾಂಕುಗಳಿಂದ ಸುಮಾರು ₹ 20 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ’ ಎಂದು ಸಚಿವ ತಿಳಿಸಿದರು.
‘ಕಳೆದ ವರ್ಷ ಕಲಬುರ್ಗಿ ಹೊರತುಪಡಿಸಿ 27 ಲಕ್ಷ ರೈತರಿಗೆ ₹ 17,800 ಕೋಟಿ ಸಾಲ ನೀಡಿದ್ದೇವೆ. ಆದರೆ, ನಮ್ಮ ಗುರಿ 24 ಲಕ್ಷ ರೈತರಿಗೆ ಮಾತ್ರ ನೀಡುವುದಾಗಿತ್ತು. ಗುರಿ ಮೀರಿ ಅಧಿಕಾರಿಗಳು ಸಾಧನೆ ಮಾಡಿದ್ದಾರೆ. ಇದರ ವಸೂಲಾತಿ ಕೂಡ ಚೆನ್ನಾಗಿ ನಡೆದಿದೆ’ ಎಂದೂ ತಿಳಿಸಿದರು.