ಸೇಡಂ: ‘ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆಯು ಜನರ ಸಮಗ್ರ ಅಭಿವೃದ್ದಿಗಾಗಿ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಿದೆ. ಧರ್ಮಸ್ಥಳ ಸಂಸ್ಥೆಯ ಯೋಜನೆಗಳು ಎಲ್ಲರಿಗೂ ಪ್ರೇರಣೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಸೇಡಂ ಪಟ್ಟಣದ ಬಸವನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆಯಿಂದ ನಡೆಸಲ್ಪಡುವ ಸಾಮಾನ್ಯ ಸೇವಾ ಕೇಂದ್ರವನ್ನು ಭಾನುವಾರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯ ಯೋಜನೆಯ ವಿವಿಧ ಕಾರ್ಯಕ್ರಮಗಳಾದ ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ದೇವಸ್ಥಾನಗಳ ಜೀರ್ಣೋದ್ದಾರ, ನಿರ್ಗತಿಕರಿಗೆ ಮಾಶಾಸನ, ಶುದ್ದಕುಡಿಯುವ ನೀರಿನ ಘಟಕ, ಶಾಲೆಗಳಿಗೆ ಶಿಕ್ಷಕರ ನೇಮಕ, ಶಾಲೆ ಗಳಿಗೆ ಡೆಸ್ಕ್ ಬೆಂಚ್, ವಿದ್ಯಾರ್ಥಿವೇತನ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಯೋಜನೆಯ ಸೇಡಂ ತಾಲೂಕು ಯೋಜನಾಧಿಕಾರಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಸೇಡಂ ತಾಲೂಕಿನಲ್ಲಿ 2994 ಸ್ವ-ಸಹಾಯ ಸಂಘಗಳನ್ನು ರಚಿಸುವ ಮೂಲಕ ಜನರ ಆರ್ಥಿಕಾಬಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಸರ್ಕಾರದ ವಿವಿಧ ಸೇವೆಗಳನ್ನು ತಾಲ್ಲೂಕಿನಲ್ಲಿ 23 ಸೇವಾಕೇಂದ್ರಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುತ್ತೆವೆ. ತಾಲ್ಲೂಕಿನಲ್ಲಿ 5 ಕೆರೆಗಳ ಹೂಳೆತ್ತುವ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಾಸಕರು ಪಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಶ್ರಮ ಕಾರ್ಡ್ ವಿತರಿಸಿದರು.
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ, ಸುಜಾತಾ ಹಿರೇಮಠ, ಪ್ರಮುಖರಾದ ಓಂಪ್ರಕಾಶ ಪಾಟೀಲ, ರಾಮು ನಾಯಕ, ಶಿವಾನಂದಸ್ವಾಮಿ ಹಾಗೂ ಯೋಜನೆಯ ಆಂತರಿಕ ಲೆಕ್ಕಪರಿಶೋದಕ ರಾಚಪ್ಪ ಕುಂಬಾರ, ಬಸವರಾಜ ಕೋರವಾರ, ವಲಯ ಮೇಲ್ವಿಚಾರಕಿ ಶ್ರೀಮತಿ ಬಸಮ್ಮ, ಆಕಾಶ ಕೀರಮಾನಕರ ಕಾವೇರಿ ಇದ್ದರು.